ADVERTISEMENT

ಜಾಹೀರಾತು: ಕಡಿವಾಣಕ್ಕೆ ಸಚಿವರ ತಂಡ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಜನರನ್ನು ಹಾದಿ ತಪ್ಪಿಸುವ ಜಾಹೀರಾತುಗಳು ಇತ್ತೀಚೆಗೆ ಹೆಚ್ಚುತ್ತಿವೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಅವುಗಳಿಗೆ ಕಡಿವಾಣು ಹಾಕಲು ಅಂತರ ಸಚಿವರ ತಂಡವೊಂದನ್ನು ರಚಿಸಲು ಗಂಭೀರ ಚಿಂತನೆ ನಡೆಸಿದೆ.

ಇಂತಹ ಜಾಹೀರಾತುಗಳನ್ನು ನಿಯಂತ್ರಿಸುವ ಮಾರ್ಗೋಪಾಯಗಳನ್ನು ವಿವಿಧ ಸಚಿವರನ್ನು ಒಳಗೊಂಡ ತಂಡ ಸರ್ಕಾರಕ್ಕೆ ಸೂಚಿಸಲಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ವಿ.ಥಾಮಸ್ ಗುರುವಾರ ತಿಳಿಸಿದರು.

ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ, ಗ್ರಾಹಕರ ರಕ್ಷಣಾ ಕಾಯ್ದೆ, ಔಷಧ ಮತ್ತು ಸೌಂದರ್ಯ ವರ್ಧಕ ಗುಣಮಟ್ಟ ಕಾಯ್ದೆಗಳಂತಹ ಅನೇಕ ಕಾನೂನುಗಳು ಜಾರಿಯಲ್ಲಿವೆ. ಆದರೂ, ಇಂಥ ಜಾಹೀರಾತುಗಳ ನಿಗ್ರಹ ಸಾಧ್ಯವಾಗುತ್ತಿಲ್ಲ. ಬದಲಾಗಿ ದಿನೇ ದಿನೇ ಅವುಗಳ ಹಾವಳಿ ಮಿತಿ ಮೀರುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಗ್ರಾಹಕರ ವ್ಯವಹಾರಗಳ ಸಚಿವಾಲಯ ಇಂಥ ಜಾಹೀರಾತುಗಳಿಗೆ ಕಡಿವಾಣ ಹಾಕಲು ಅಗತ್ಯವಿರುವ ಸಮಗ್ರ ಕಾನೂನು ರೂಪಿಸಲು ಮುಂದಾಗಿದ್ದು, ದೇಶದಾದ್ಯಂತ ಗ್ರಾಹಕರ, ಸಂಘ, ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದು ತಿಳಿಸಿದರು.

ಕಠಿಣ ಕಾನೂನು ಜಾರಿಗೆ ತಂದಲ್ಲಿ ಗ್ರಾಹಕರು ಹಾದಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಅವಕಾಶವಿದೆ ಎಂದು ಥಾಮಸ್ ತಿಳಿಸಿದರು.

`ಟಿ.ವಿ, ಅಂತರ್ಜಾಲ ಯುಗದಲ್ಲಿ ಪ್ರತಿ ಮಾಧ್ಯಮಕ್ಕೂ ನಿರ್ದಿಷ್ಟ ಕಾನೂನು ಕಟ್ಟಳೆ ವಿಧಿಸುವುದು ಕಷ್ಟಸಾಧ್ಯ. ಹೀಗಾಗಿ ಎಲ್ಲ ಮಾಧ್ಯಮಗಳಿಗೂ ಅನ್ವಯವಾಗುವಂತಹ ಕಾನೂನು ರಚನೆ ನಮ್ಮ ಗುರಿ~ ಎಂದು ಸಚಿವರು ಅಭಿಪ್ರಾಯಪಟ್ಟರು. 

ಸರ್ಕಾರದ ನಿಷೇಧದ ಹೊರತಾಗಿಯೂ ಭಾರತದಲ್ಲಿ ಸಿಗರೇಟ್, ಬೀಡಿ, ಗುಟ್ಕಾ, ಮದ್ಯ, ಪಾನ್ ಮಸಾಲದಂಥ ಆರೋಗ್ಯಕ್ಕೆ ಮಾರಕವಾದ ಜಾಹೀರಾತುಗಳು ನಿತ್ಯ ಎಲ್ಲ ಮಾದ್ಯಮಗಳಲ್ಲಿ ಎಗ್ಗಿಲ್ಲದೆ ರಾಜಾಜಿಸುತ್ತಿವೆ.  ಈ ನಿಟ್ಟಿನಲ್ಲಿ ಸಮಗ್ರ ಕಾನೂನು ಜಾರಿಗೆ ವಿವಿಧ ಸಚಿವಾಲಯಗಳು ಸಹಕರಿಸಬೇಕು ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.