ನವದೆಹಲಿ(ಪಿಟಿಐ): ರಾಜಸ್ತಾನ ಪತ್ರಿಕಾಕ್ಕೆ ಸರ್ಕಾರಿ ಜಾಹೀರಾತು ನಿಲ್ಲಿಸಲು ನಿರ್ಧರಿಸಿರುವ ಛತ್ತೀಸ್ಗಡ ಸರ್ಕಾರದ ನಿರ್ಧಾರವನ್ನು ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್) ತೀವ್ರವಾಗಿ ಖಂಡಿಸಿದೆ.
ಸರ್ಕಾರದ ಪರವಾದ ಸಂಪಾದಕೀಯ ಮತ್ತು ಸುದ್ದಿಗಳು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಪತ್ರಿಕೆಗೆ ಜಾಹೀರಾತು ನಿಲ್ಲಿಸುವುದು ಸರಿಯಲ್ಲ ಎಂದು ಅದು ಹೇಳಿದೆ.
ವಿಧಾನಸಭೆಯ ಕಲಾಪ ವರದಿ ಮಾಡಲು ಈ ಪತ್ರಿಕೆಯ ವರದಿಗಾರರಿಗೆ ಅವಕಾಶ ನಿರಾಕರಿಸಿರುವ ಛತ್ತೀಸ್ಗಡ ವಿಧಾನಸಭೆ ಸ್ಪೀಕರ್ ಕ್ರಮವೂ ಸರಿಯಿಲ್ಲ ಎಂದು ಗಿಲ್ಡ್ ಖಂಡಿಸಿದೆ. ಈ ಸಂಬಂಧ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಗಿಲ್ಡ್ ಅಧ್ಯಕ್ಷ ಟಿ.ಎನ್. ನಿನಾನ್ ಪತ್ರ ಬರೆದಿದ್ದಾರೆ.ಪತ್ರಿಕೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಜಾಹೀರಾತು ನೀಡುವುದಿಲ್ಲ. ಜನರಿಗೆ ಯಾವುದೋ ವಿಚಾರ ಮುಟ್ಟಿಸುವ ಉದ್ದೇಶದಿಂದ ಜಾಹೀರಾತು ಪ್ರಕಟಿಸಲಾಗುತ್ತದೆ.
ಸಂಪಾದಕೀಯ ಹಾಗೂ ಜಾಹೀರಾತಿನ ನಡುವೆ ಸಂಬಂಧ ಕಲ್ಪಿಸಿದಲ್ಲಿ ಪತ್ರಿಕೆಯ ಮೇಲೆ ಆರ್ಥಿಕ ಒತ್ತಡ ತಂದಂತೆ ಆಗುತ್ತದೆ. ಆ ಮೂಲಕ ಅಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ನಿನಾನ್ ಪತ್ರದಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.