ಕೊಚ್ಚಿ: ಕೇರಳದ ಕೊಚ್ಚಿ ನಗರದ ಮೆಟ್ರೊ ರೈಲು ಪ್ರಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಲಿದ್ದಾರೆ. ‘ಮೆಟ್ರೊ ಮ್ಯಾನ್’ ಖ್ಯಾತಿಯ, ದೆಹಲಿ ಮೆಟ್ರೊ ರೈಲು ನಿಗಮದ ಹಿರಿಯ ಸಲಹೆಗಾರ ಇ. ಶ್ರೀಧರನ್ ಅವರನ್ನು ಉದ್ಘಾಟನಾ ಸಮಾರಂಭದ ಗಣ್ಯ ಅತಿಥಿಗಳ ಸಾಲಿನಲ್ಲಿ ಸೇರಿಸದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
2012ರಲ್ಲಿ ಕೊಚ್ಚಿ ಮೆಟ್ರೊ ಕಾಮಗಾರಿ ಆರಂಭವಾಗಿತ್ತು. ಮೆಟ್ರೊ ಕಾಮಗಾರಿ ಹೊಣೆಯನ್ನು ದೆಹಲಿ ಮೆಟ್ರೊ ರೈಲು ನಿಗಮಕ್ಕೆ ವಹಿಸಲಾಗಿತ್ತು. ಹೀಗಾಗಿ ಕೊಚ್ಚಿ ಮೆಟ್ರೊ ನಿರ್ಮಾಣದ ಶ್ರೇಯ ಶ್ರೀಧರನ್ ಅವರಿಗೂ ಸಲ್ಲಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಉದ್ಘಾಟನೆ ಬಳಿಕ ಮೆಟ್ರೊ ರೈಲಿನಲ್ಲಿ ಪ್ರಧಾನಿ ಜತೆ ಪ್ರಯಾಣಿಸಲಿರುವವರ ಪಟ್ಟಿಯನ್ನು ಪರಿಷ್ಕರಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಕೇರಳ ಸರ್ಕಾರ ಪತ್ರ ಬರೆದಿದೆ. ಇ. ಶ್ರೀಧರನ್, ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಲ, ಮತ್ತು ಕೊಚ್ಚಿಯ ಸಂಸದರನ್ನು ಗಣ್ಯರ ಸಾಲಿನಲ್ಲಿ ಸೇರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಸಭಾ ಕಾರ್ಯಕ್ರದಲ್ಲಿ ಭಾಗವಹಿಸುವ 14 ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಶ್ರೀಧರನ್ ಅವರ ಹೆಸರನ್ನೂ ಸೇರಿಸಲಾಗಿದೆ. ಅಂತಿಮ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯ ಸಿದ್ಧಪಡಿಸಿದ್ದು, ತಮ್ಮ ಪಾತ್ರವಿಲ್ಲ ಎಂದು ಕೊಚ್ಚಿ ಮೆಟ್ರೊ ರೈಲು ನಿಗಮ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.