ADVERTISEMENT

ಜೈಲಲ್ಲಿರುವ ಸಚಿವರಿಂದ ಮೊಬೈಲ್ ಬಳಕೆ: ಗದ್ದಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ತಿರುವನಂತಪುರಂ(ಪಿಟಿಐ):  ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ  ಮಾಜಿ ಸಚಿವ ಹಾಗೂ ಕೇರಳ  ಕಾಂಗ್ರೆಸ್(ಬಿ) ಮುಖಂಡ ಆರ್.ಬಾಲಕೃಷ್ಣನ್ ಪಿಳ್ಳೆ ಮೊಬೈಲ್ ಫೋನ್ ಬಳಸುತ್ತಿದ್ದಾರೆ ಎಂದು ಆರೋಪಿಸಿ  ವಿರೋಧ ಪಕ್ಷವಾದ ಎಲ್‌ಡಿಎಫ್ ಶಾಸಕರು  ಕೇರಳ ವಿಧಾನ ಸಭೆಯಿಂದ ಹೊರನಡೆದ ಘಟನೆ ಸೋಮವಾರ ನಡೆಯಿತು.

ಪಿಳ್ಳೆ ಒಡೆತನದಲ್ಲಿರುವ ಶಾಲೆಯೊಂದರ ಶಿಕ್ಷಕರ ಮೇಲೆ ನಡೆದ  ಹಲ್ಲೆ ಕುರಿತಂತೆ ನಡೆಯುತ್ತಿರುವ  ತನಿಖೆಯು ಮಂದಗತಿಯಲ್ಲಿ ನಡೆಯುತ್ತಿದೆ ಹಾಗೂ ಹಲ್ಲೆ ನಡೆದು ಆರು ದಿನಗಳು ಕಳೆದರೂ ಒಬ್ಬರನ್ನು ಬಂಧಿಸಿಲ್ಲ ಎಂದು ಆರೋಪಿಸಿ ವಿ.ಎಸ್. ಅಚ್ಯುತಾನಂದನ್  ಅವರ ನೇತೃತ್ವದಲ್ಲಿ  ಎಲ್‌ಡಿಎಫ್ ಶಾಸಕರು ಸದನ ಕಲಾಪವನ್ನು ಬಹಿಷ್ಕರಿಸಿದರು. ಶಿಕ್ಷಕರ ಮೇಲಿನ ಹಲ್ಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿಸಂಸ್ಥೆಯೊಂದರ ಜತೆ ಪಿಳ್ಳೆ ಅವರು ಮೊಬೈಲ್ ಮೂಲಕ ಮಾತನಾಡಿದರು.

ಈ ಬಗ್ಗೆ ವಿವರಣೆ ನೀಡಿರುವ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಜೈಲಿನ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದು, ಮೊಬೈಲ್ ಬಳಸಿದ್ದು ನಿಜವಾದರೇ ಅದು ನಿಯಮದ ಉಲ್ಲಂಘನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.