ADVERTISEMENT

ಜೈಲಿಂದ ಬಂದ ಜಗನ್‌ಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:22 IST
Last Updated 24 ಸೆಪ್ಟೆಂಬರ್ 2013, 20:22 IST

ಹೈದರಾಬಾದ್‌ (ಐಎಎನ್‌ಎಸ್‌): ಸುಮಾರು 16 ತಿಂಗಳ ಸೆರೆಮನೆ ವಾಸದ ಬಳಿಕ ಚಂಚಲಗುಡ ಕೇಂದ್ರ ಕಾರಾಗೃಹದಿಂದ ಮಂಗಳವಾರ ಬಿಡುಗಡೆಯಾದ ವೈಎಸ್‌ಆರ್‌. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರಿಗೆ ಅಭಿಮಾನಿಗಳು ಭವ್ಯ ಸ್ವಾಗತ ಕೋರಿ, ಸಂಭ್ರಮ ಆಚರಿಸಿದರು.

 ಸಂಜೆ 4ಗಂಟೆಗೆ ಜೈಲಿನಿಂದ ಹೊರಬಂದ ಜಗನ್‌, ಕಾರಾಗೃಹದ ಮುಂದೆ ಅವರನ್ನು ಬರಮಾಡಿಕೊಳ್ಳಲು ನೆರೆದಿದ್ದ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳತ್ತ ಕೈಮುಗಿದರು. ಈ ವೇಳೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬಳಿಕ ಅವರು ನೇರವಾಗಿ ಜೂಬಿಲಿ ಹಿಲ್ಸ್‌ನಲ್ಲಿರುವ ತಮ್ಮ ‘ಲೋಟಸ್‌ ಪಾಂಡ್‌’ ಮನೆಗೆ ತೆರಳಿದರು. ದಾರಿಯುದ್ದಕ್ಕೂ ಅವರಿಗೆ ‘ಝಡ್‌’ ಶ್ರೇಣಿ ಭದ್ರತೆ ಒದಗಿಸಲಾಗಿತ್ತು.  ಜಗನ್‌ ಅವರ ಭಾವಚಿತ್ರ ಮತ್ತು ಪಕ್ಷದ ಧ್ವಜ ಹಿಡಿದು ಕಾರ್ಯಕರ್ತರು ಘೋಷಣೆ ಕೂಗಿದರು. ಅಲ್ಲದೇ ಬೈಕ್‌ ಮೆರವಣಿಗೆ ನಡೆಸಿದರು.

  ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಜಗನ್‌ಗೆ ಜಾಮೀನು ಮಂಜೂರು ಮಾಡಿತ್ತು. ಮಂಗಳವಾರ ಬೆಳಿಗ್ಗೆ ಜಗನ್‌ ಪರ ವಕೀಲರು ಜಾಮೀನಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆ  ಪೂಣರ್ಗೊಳಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

 ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಜಗನ್‌, ನಾಲ್ವರು ರಾಜ್ಯ ಸಚಿವರು ಮತ್ತು, ಐಎಎಸ್‌ ಅಧಿಕಾರಿಗಳು ಸೇರಿದಂತೆ ಒಟ್ಟು 70 ಮಂದಿ ವಿರುದ್ಧ ಸಿಬಿಐ 10 ಆರೋಪ ಪಟ್ಟಿ  ಸಲ್ಲಿಸಿದೆ. ಜಗನ್‌ ಬಿಡುಗಡೆಯಿಂದ ಆಂಧ್ರಪ್ರದೇಶ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT