ಕೋಲ್ಕೊತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ಬೀದಿಗೆಳೆಯುತ್ತೇನೆ ಎಂದು ಘಾತ್ಕಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರು ಟಿಎಂಸಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿರುವ ವಿಡಿಯೊ ಒಂದು ವೈರಲ್ ಆಗಿದ್ದು ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಆನಂದಪುರ ಲೋಕಸಭಾ ಕ್ಷೇತ್ರದ ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ವಿಡಿಯೊ ಇದಾಗಿದೆ.
‘ನಿಮ್ಮನ್ನು (ಟಿಎಂಸಿ ಕಾರ್ಯಕರ್ತರು) ಮನೆಯಿಂದ ಎಳೆತಂದು ನಾಯಿಗಳಂತೆ ಸಾಯಿಸುತ್ತೇನೆ. ಉತ್ತರ ಪ್ರದೇಶದಿಂದ ಸಾವಿರ ಜನರನ್ನು ಕರೆತರುತ್ತೇನೆ. ನೀವು ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ರಕ್ಷಣೆ ಪಡೆಯಿರಿ’ ಎಂದು ಘೋಷ್ ಹೇಳಿರುವುದು ವಿಡಿಯೊದಲ್ಲಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬ್ಯಾನರ್ಜಿ, ‘ಆಕೆಯ ವಿರುದ್ಧ ಅನೇಕ ಪ್ರಕರಣಗಳಿವೆ. ನಾವು ಆಕೆಯನ್ನು ಬಂಧಿಸಬಹುದು. ಆದರೆ, ಹಾಗೆ ಮಾಡುತ್ತಿಲ್ಲ. ಆದರೆ ಮಿತಿ ಮೀರಿ ವರ್ತಿಸದಿರುವುದು ಆಕೆಗೆ ಕ್ಷೇಮಕರ’ ಎಂದಿದ್ದಾರೆ.
ಘೋಷ್ ಅವರು ನಕ್ಸಲ್ ಪೀಡಿತ ಜಿಲ್ಲೆಗಳಾದ ಮೇದಿನಿಪುರ್ ಮತ್ತು ಜರ್ಗ್ರಾಮ್ನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆಗಿ ಹಿಂದೆ ಕೆಲಸ ಮಾಡಿದ್ದರು. ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿ ಗಮನಸೆಳೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.