ನವದೆಹಲಿ (ಪಿಟಿಐ): ಪತ್ರಕರ್ತ ಜೆ. ಡೇ ಹತ್ಯೆ ಪ್ರಕರಣದ ತನಿಖೆಯು ಹೆಚ್ಚಿನ ಪ್ರಗತಿ ಕಾಣದಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬಿಜೆಪಿ, `ನಿಷ್ಪಕ್ಷಪಾತ~ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬುಧವಾರ ಆಗ್ರಹಿಸಿದೆ.
ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರಿಗೆ ಪತ್ರಬರೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, `ಡೇ ಹತ್ಯೆ ಪ್ರಕರಣದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದು ಹೆಚ್ಚು ಸೂಕ್ತ. ಆ ಮೂಲಕ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಬಹುದು~ ಎಂದು ಹೇಳಿದ್ದಾರೆ.
ಡೇ ಹತ್ಯೆ ನಡೆದು ಐದು ದಿನಗಳು ಕಳೆದರೂ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬರದೇ ಇರುವುದಕ್ಕೆ ಗಡ್ಕರಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ದುಷ್ಕೃತ್ಯದಲ್ಲಿ ದೇಶದಲ್ಲಿರುವ ಮತ್ತು ವಿದೇಶಗಳಲ್ಲಿರುವ ಭೂಗತ ದೊರೆಗಳ ಕೈವಾಡವಿರುವ ಸಾಧ್ಯತೆಯನ್ನು ಚವಾಣ್ ಅವರೇ ಪರಿಶೀಲಿಸುವಂತೆಯೂ ಗಡ್ಕರಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರು ಹಂತಕರನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಕೈಗೊಂಡರೆ ಮಾಧ್ಯಮಗಳ ಮಂದಿ ಮತ್ತು ಸಾರ್ವಜನಿಕರಲ್ಲಿ ಕೊಂಚ ವಿಶ್ವಾಸ ಮೂಡಬಹುದು ಎಂದೂ ಗಡ್ಕರಿ ಬರೆದಿದ್ದಾರೆ.
ಈ ನಡುವೆ, ಈ ಹತ್ಯೆ ಪ್ರಕರಣದ ತನಿಖೆಯಲ್ಲಿ ಕೆಲವು ಮಹತ್ವದ ಬೆಳವಣಿಗೆಗಳಾಗಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸಚಿವ ಸಂಪುಟ ಸಭೆಯ ಬಳಿಕ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.