ADVERTISEMENT

ಜಲ್ಲಿಕಟ್ಟು: ತಮಿಳುನಾಡಲ್ಲಿ ಆತ್ಮಾಹುತಿ ಯತ್ನ

ತಡೆ ತೆರವಿಗೆ ಸುಪ್ರೀಂ ಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2016, 19:30 IST
Last Updated 13 ಜನವರಿ 2016, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ನವದೆಹಲಿ/ ಚೆನ್ನೈ (ಪಿಟಿಐ): ಜಲ್ಲಿಕಟ್ಟು ಸ್ಪರ್ಧೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್‌ ಬುಧವಾರ ನಿರಾಕರಿ ಸಿದ್ದರಿಂದ ಪೊಂಗಲ್ ಹಬ್ಬದಂದು ಸ್ಪರ್ಧೆ ನಡೆಸುವ ತಮಿಳುನಾಡು ಜನತೆಯ ಕೊನೆಯ ಪ್ರಯತ್ನವೂ ವಿಫಲಗೊಂಡಿದೆ. ಸುಪ್ರೀಂಕೋರ್ಟ್ ನಿಲುವಿನಿಂದ ಆಕ್ರೋಶಗೊಂಡಿರುವ ಜನರು ತಮಿಳು ನಾಡಿನಾದ್ಯಂತ ಪ್ರತಿಭಟನೆ ತೀವ್ರಗೊ ಳಿಸಿದ್ದಾರೆ.

ಆತ್ಮಾಹುತಿಗೆ ಯತ್ನ: ಜಲ್ಲಿಕಟ್ಟು ನಿಷೇಧ ದಿಂದ ಹತಾಶಗೊಂಡ ವ್ಯಕ್ತಿಯೊಬ್ಬ ತಿರುಚಿನಾಪಳ್ಳಿಯಲ್ಲಿ ಮೈಗೆ ಬೆಂಕಿ ಹೊತ್ತಿಸಿಕೊಂಡು ಆತ್ಮಾಹುತಿಗೆ ಯತ್ನಿಸಿದ. ಪೊಲೀಸರು ಮಧ್ಯಪ್ರವೇಶಿಸಿ ಆತನ ಯತ್ನವನ್ನು ವಿಫಲಗೊಳಿಸಿದರು. ಈ ಮಧ್ಯೆ ಜಲ್ಲಿಕಟ್ಟು ಸ್ಪರ್ಧೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿ ಸಲು ಸಾಧ್ಯವಿಲ್ಲ ಎಂದು ಕೇಂದ್ರ  ಸರ್ಕಾರ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ.
ನ್ಯಾಯಾಲಯದಲ್ಲಿ ಅರ್ಜಿಗಳ ವಿಚಾರಣೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಾಧ್ಯವಿಲ್ಲ  ಎಂದು ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ತಿಳಿಸಿದೆ.

ರಾಜ್ಯ ಸರ್ಕಾರ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಬಹುದಾಗಿದ್ದು, ಈ ವಿಚಾರದಲ್ಲಿ ನಾವು ಬೆಂಬಲ ನೀಡುತ್ತೇವೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಹಾಮಲ್ಲಪುರಂನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜಲ್ಲಿಕಟ್ಟು ಸ್ಪರ್ಧೆಗೆ ಕೋರ್ಟ್ ಆದೇಶ ಅಡ್ಡಿಯಾಗಿದ್ದರಿಂದ  ಉದ್ರಿಕ್ತಗೊಂಡ ಜನರು ಚೆನ್ನೈ, ಮದುರೆ, ತಿರುಚಿನಾಪಳ್ಳಿ, ಪುದುಕೋಟ್ಟೈ ಮತ್ತು ಸೇಲಂನಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಚೆನ್ನೈಯಲ್ಲಿ ‘ಮೇ 17 ಆಂದೋಲನ’ ಮತ್ತು ‘ತಮಿಳರ ಮುನ್ನೇತ್ರ ಪಡಿ’ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶ ಮಾಡಿ ಜಲ್ಲಿಕಟ್ಟು ನಡೆಯಲು ಅನುಕೂಲ ಮಾಡಿಕೊ ಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮದುರೆ ಜಿಲ್ಲೆಯ ಅಲಂಗನಲ್ಲೂರು ಮತ್ತು ಪಲಮೇಡುವಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯ ಅಭಿಮಾನಿಗಳು ಉಪವಾಸ ಸತ್ಯಾಗ್ರಹ ನಡೆಸಿದರು.
ಕೆಲವು ಕಡೆಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ರಸ್ತೆ ತಡೆ ನಡೆಸಲಾಯಿತು. ಕೇಶ ಮುಂಡನ: ಮದುರೆಯಲ್ಲಿ ಕೆಲವು ಯುವಕರು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕೇಶ  ಮುಂಡನ ಮಾಡಿಸಿಕೊಂಡರು.

ಸೂಕ್ತ ಕ್ರಮದ ಭರವಸೆ
ಜಲ್ಲಿಕಟ್ಟು ಸ್ಪರ್ಧೆ ನಡೆಸಲು ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಜಲ ಸಾರಿಗೆ ರಾಜ್ಯ ಸಚಿವ ಪೊನ್ ರಾಧಾಕೃಷ್ಣನ್ ಕಡಲೂರಿನಲ್ಲಿ ಭರವಸೆ ನೀಡಿದ್ದಾರೆ. ಈ ಗ್ರಾಮೀಣ ಸ್ಪರ್ಧೆಯನ್ನು  ನಿಷೇಧಿಸಲು ಕಾರಣರಾದವರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನರ ನಿರೀಕ್ಷೆ ಹುಸಿಯಾಗದಿರಲಿ:  ಜಲ್ಲಿಕಟ್ಟು ಸ್ಪರ್ಧೆ ನಡೆಯುತ್ತದೆ ಎಂಬ ಜನರ ನಿರೀಕ್ಷೆ ಹುಸಿಯಾಗದಂತೆ ನೋಡಿ ಕೊಳ್ಳಬೇಕು ಎಂದು ಪಿಎಂಕೆ ಮುಖಂಡ ರಾಮದಾಸ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.