ನವದೆಹಲಿ: ಪಶ್ಚಿಮ ಬಂಗಾಳ ಅಲ್ಪಸಂಖ್ಯಾತ ಒಕ್ಕೂಟದ ಉಪಾಧ್ಯಕ್ಷರಾದ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಅವರ ₹ 10 ಲಕ್ಷ ಬಹುಮಾನದ ಘೋಷಣೆಗೆ ಪ್ರತಿಕ್ರಿಯೆಯಾಗಿ ಗಾಯಕ ಸೋನು ನಿಗಮ್ ಅವರು ಬುಧವಾರ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ.
ತಲೆಬೋಳಿಸಿಕೊಂಡ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸೋನು ನಿಗಮ್, ‘ನಾನು ಮುಂಜಾನೆ ಧ್ವನಿವರ್ಧಕಗಳಲ್ಲಿ ಕೇಳುವ ‘ಬಾಂಗ್’ (ಪ್ರಾರ್ಥನೆಯ ಕರೆ) ಬಗ್ಗೆ ಮಾತ್ರ ಮಾತನಾಡಿದ್ದೇನೆ. ನಾನು ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ. ಪ್ರತಿಯೊಬ್ಬರಿಗೂ ಅವರಿಗೆ ಅನಿಸಿದ್ದನ್ನು ಹೇಳಲು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ’ ಎಂದಿದ್ದಾರೆ.
‘ನಾನು ಮಹಮ್ಮದ್ ರಫಿ ಅವರನ್ನು ನನ್ನ ತಂದೆ ಹಾಗೂ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರನ್ನು ಗುರುವಾಗಿ ಕಂಡಿದ್ದೇನೆ. ಆದರೆ ನನ್ನನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಇದು ನನ್ನ ಸಮಸ್ಯೆಯಲ್ಲ, ನಿಮ್ಮ ಸಮಸ್ಯೆ’ ಎಂದು ಸೋನು ಹೇಳಿದ್ದಾರೆ.
‘ಸೋನು ನಿಗಮ್ ಅವರ ತಲೆ ಬೋಳಿಸಿ, ಅವರ ಕೊರಳಿಗೆ ಹಳೆಯ ಬೂಟುಗಳ ಹಾರ ಹಾಕಿ ಅವರನ್ನು ದೇಶದಾದ್ಯಂತ ಮೆರವಣಿಗೆ ಮಾಡಿದವರಿಗೆ ₹ 10 ಲಕ್ಷ ಬಹುಮಾನ ನೀಡುವೆ’ ಎಂದು ಪಶ್ಚಿಮ ಬಂಗಾಳ ಅಲ್ಪಸಂಖ್ಯಾತ ಒಕ್ಕೂಟದ ಉಪಾಧ್ಯಕ್ಷರಾದ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಘೋಷಿಸಿದ್ದರು.
ಈ ಘೋಷಣೆಗೆ ಪ್ರತಿಕ್ರಿಯಿಸಿದ್ದ ಸೋನು ನಿಗಮ್, ‘ಇಂದು ಮಧ್ಯಾಹ್ನ 2 ಗಂಟೆಗೆ ನಾನಿರುವಲ್ಲಿಗೆ ಆಲಿಮ್ ಬಂದು ನನ್ನ ತಲೆ ಬೋಳಿಸುತ್ತಾನೆ. ಮೌಲ್ವಿಯವರೆ ನೀವು ₹ 10 ಲಕ್ಷ ಸಿದ್ಧ ಮಾಡಿಕೊಂಡಿರಿ’ ಎಂದು ಟ್ವೀಟ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.