ಡಾಸ್ನಾ, ಉತ್ತರ ಪ್ರದೇಶ: ಆರುಷಿ–ಹೇಮರಾಜ್ ಜೋಡಿ ಕೊಲೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ನಿಂದ ಖುಲಾಸೆಗೊಂಡಿರುವ ದಂತವೈದ್ಯ ದಂಪತಿ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಅವರು ಸೋಮವಾರ ಸಂಜೆ ಡಾಸ್ನಾ ಜೈಲಿನಿಂದ ಬಿಡುಗಡೆಯಾದರು. ಇವರು ಜೈಲಿನಲ್ಲಿ ಸರಿಸುಮಾರು 4 ವರ್ಷಗಳನ್ನು ಕಳೆದಿದ್ದಾರೆ.
ನೊಯಿಡಾದ ಜಲವಾಯುವಿಹಾರ ಪ್ರದೇಶದಲ್ಲಿರುವ ನೂಪುರ್ ಅವರ ತಂದೆಯ ಮನೆಗೆ ದಂಪತಿ ತೆರಳಿದರು. ಇದೇ ಪ್ರದೇಶದಲ್ಲಿರುವ ದಂಪತಿಯ ಮನೆಯಲ್ಲಿ ಆರುಷಿ ಹಾಗೂ ಸಹಾಯಕ ಹೇಮರಾಜ್ ಕೊಲೆಯಾಗಿದ್ದರು. ತಲ್ವಾರ್ ದಂಪತಿ ಹೊರಬಂದಾಗ ಜೈಲಿನ ಹೊರಗಡೆ ಪತ್ರಕರ್ತರು ಹಾಗೂ ಜನರು ಸೇರಿದ್ದರು.
ಸಂಭಾವನೆ ಬೇಡ: ಜೈಲಿನಲ್ಲಿ ಕೈದಿಗಳಿಗೆ ದಂತ ಚಿಕಿತ್ಸೆ ನೀಡಿದ್ದಕ್ಕೆ ಪ್ರತಿಯಾಗಿ ಸಂಭವನೆ ಪಡೆಯಲು ರಾಜೇಶ್ ಹಾಗೂ ನೂಪುರ್ ತಲ್ವಾರ್ ದಂಪತಿ ನಿರಾಕರಿಸಿದ್ದಾರೆ. 2013ರಿಂದ ಜೈಲಿನಲ್ಲಿರುವ ದಂಪತಿ, ಅಂದಿನಿಂದ ಕೈದಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರಿಗೆ ₹49,500 ಸಂಭಾವನೆ ನೀಡಲಾಗಿತ್ತು. ಆದರೆ ಅವರು ಇದನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಜೈಲು ಅಧೀಕ್ಷಕ ದಾಧಿರಾಮ್ ಮೌರ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.