ADVERTISEMENT

ತಾಜ್‌ ರಕ್ಷಣೆ: ಭಾರತೀಯ ಪುರಾತತ್ವ ಇಲಾಖೆಗೆ ‘ಸುಪ್ರೀಂ’ ತರಾಟೆ

ಪಿಟಿಐ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ತಾಜ್‌ಮಹಲ್‌
ತಾಜ್‌ಮಹಲ್‌   

ನವದೆಹಲಿ: ‘ತಾಜ್‌ಮಹಲ್‌ ರಕ್ಷಣೆಯ ಕೆಲಸದಿಂದ ಭಾರತೀಯ ಪುರಾತತ್ವ ಇಲಾಖೆಯನ್ನು (ಎಎಸ್‌ಐ) ಕಿತ್ತೊಗೆಯಬೇಕು. ಈ ವಿಚಾರದಲ್ಲಿ ತಾನು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆ ಸಂಸ್ಥೆಯೇ ಹೇಳುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಾಜ್‌ ಸಂರಕ್ಷಣೆಗೆ ಸಂಬಂಧಿಸಿ ನಡೆದ ವಿಚಾರಣೆಯಲ್ಲಿ ಎಎಸ್‌ಐಯನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ವಿಶ್ವ‍ಪ್ರಸಿದ್ಧ ಪ್ರೇಮ ಸ್ಮಾರಕ, ಅಮೃತಶಿಲೆಯ ತಾಜ್‌ಮಹಲ್‌ನ ಗೋಡೆಗಳಲ್ಲಿ ಕಾಣಿಸಿಕೊಂಡಿರುವ ಪಾಚಿ ಆತಂಕಕ್ಕೆ ಕಾರಣವಾಗಿದೆ ಎಂದು ಎಎಸ್‌ಐ ಪರ ವಕೀಲರು ಹೇಳಿದ್ದು
ನ್ಯಾಯಪೀಠವನ್ನು ಕೆರಳಿಸಿತು.

‘ಪಾಚಿ ಹಾರಬಲ್ಲದೇ? ಅದು ಹೇಗೆ ಸ್ಮಾರಕದ ತುದಿ ತಲುಪಿದೆ’ ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠ ಪ್ರಶ್ನಿಸಿತು. ತಾಜ್‌ಮಹಲ್‌ನ ಇತ್ತೀಚಿನ ಚಿತ್ರಗಳನ್ನು ಪರಿಶೀಲಿಸಿದ ಪೀಠವು, ಗೋಡೆಗಳಲ್ಲಿ ಕ್ರಿಮಿ ಕೀಟಗಳು ಮತ್ತು ಪಾಚಿ ಇರುವುದನ್ನು ಕಂಡು ಕಳವಳ ವ್ಯಕ್ತಪಡಿಸಿತು.

ADVERTISEMENT

‘ತಾಜ್‌ಮಹಲ್‌ನ ಸಂರಕ್ಷಣೆಗೆ ನಿಜವಾಗಿಯೂ ಎಎಸ್ಐ ಅಗತ್ಯ ಇದೆಯೇ ಎಂಬುದನ್ನು ಪರಿಶೀಲಿಸಿ. ಎಎಸ್‌ಐ ನೀಡಿರುವ ಪ್ರಮಾಣಪತ್ರದಿಂದ ಆ ಸಂಸ್ಥೆಯ ನಿಲುವು ಬಹಳ ಸ್ಪ‍ಷ್ಟ. ಅದು ಸಮಸ್ಯೆಯನ್ನು ಒಪ್ಪಿಕೊಳ್ಳುವುದಕ್ಕೇ ಸಿದ್ಧ ಇಲ್ಲ’ ಎಂದು ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎ.ಎನ್‌.ಎಸ್‌. ನಾಡಕರ್ಣಿಯವರಿಗೆ ಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.