ಹೈದರಾಬಾದ್: ತಿರುಪತಿಯ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ಶುದ್ಧೀಕರಣ ಕಾರ್ಯ `ಕೋಯಿಲ್ ಆಳ್ವಾರ್ ತಿರುಮಂಜನಂ~ ನಡೆಯಿತು.
ಈ ಕಾರ್ಯದ ಅಂಗವಾಗಿ ಗರ್ಭಗುಡಿಯೂ ಸೇರಿದಂತೆ ದೇವಾಲಯ ಸಂಕೀರ್ಣವನ್ನು ಸ್ವಚ್ಛಗೊಳಿಸಲಾಯಿತು.
ಗರ್ಭಗುಡಿಯಲ್ಲಿನ ಎಲ್ಲ ವಿಗ್ರಹಗಳು ಮತ್ತು ಸಾಮಗ್ರಿಗಳನ್ನು ಬೇರೆಡೆ ವರ್ಗಾಯಿಸಲಾಯಿತಲ್ಲದೆ ಮೂಲ ವಿಗ್ರಹವನ್ನೂ ನೀರಿನಿಂದ ಶುದ್ಧಿಗೊಳಿಸಲಾಯಿತು.
ದೇವಸ್ಥಾನದ ನೆಲ, ಗೋಡೆಗಳು, ಕಂಬಗಳು ಸೇರಿದಂತೆ ದೇವಾಲಯ ಸಂಕೀರ್ಣದೊಳಗಿನ ಇತರ ಸಣ್ಣ ದೇಗುಲಗಳನ್ನೂ ಸ್ವಚ್ಛಗೊಳಿಸಿದ ಬಳಿಕ ಕುಂಕುಮ, ಕೇಸರಿ, ಕರ್ಪೂರ ಮತ್ತು ಗಂಧದ ಲೇಪನ ಹಚ್ಚಿ ಮೂರ್ತಿಗಳನ್ನು ಶೃಂಗರಿಸಲಾಯಿತು.
ಶುದ್ಧಿ ಕಾರ್ಯದ ಅಂಗವಾಗಿ ದೇವಸ್ಥಾನವನ್ನು ಮಂಗಳವಾರ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಮುಚ್ಚಲಾಗಿತ್ತು.
ಆಗಮ ಶಾಸ್ತ್ರದ ಪ್ರಕಾರ ಶುದ್ಧೀಕರಣ ಕಾರ್ಯ ನಡೆಸಲಾಗುತ್ತಿದ್ದು, ವರ್ಷಕ್ಕೆ ನಾಲ್ಕು ಬಾರಿ ಈ ಕ್ರಿಯೆ ನಡೆಯುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಲಿಯು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.