ADVERTISEMENT

ತೆಲಂಗಾಣ: ಆಂಧ್ರದಲ್ಲಿ ರಾಷ್ಟ್ರಪತಿ ಆಡಳಿತ ?

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಎರಡನೇ ಬಾರಿಗೆ ರಾಷ್ಟ್ರಪತಿ ಆಡಳಿತದತ್ತ ಸಾಗುತ್ತಿದೆಯೇ?

ರಾಜ್ಯದಲ್ಲಿ ಹದಗೆಟ್ಟಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದಸರಾ ಉತ್ಸವದ ನಂತರ ರಾಷ್ಟ್ರಪತಿ ಆಡಳಿತ ವಿಧಿಸುವ ಅನಧಿಕೃತ ವದಂತಿ ಈಗ ಹರಿದಾಡುತ್ತಿದೆ. ಮುಖ್ಯಮಂತ್ರಿ ಕಚೇರಿ ಮತ್ತು ಗುಪ್ತಚರ ಮೂಲಗಳ ಪ್ರಕಾರ, ಈಗಾಗಲೇ ಈ ಯೋಜನೆ ಸಿದ್ಧವಾಗಿದ್ದು ಇನ್ನೊಂದು ವಾರದಲ್ಲಿ ದೆಹಲಿಯಲ್ಲಿ ನಿರ್ಧಾರ ಪ್ರಕಟವಾಗಲಿದೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿರುವುದಕ್ಕಿಂತ ಹೆಚ್ಚಾಗಿ ನಾಗರಿಕ ಸೇವೆ ಕುಸಿದಿರುವ ಕಾರಣವನ್ನು ಮುಂದೊಡ್ಡಿ ಕಾಂಗ್ರೆಸ್ ವರಿಷ್ಠರು ಈ ತೀರ್ಮಾನಕ್ಕೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಗುಪ್ತಚರ ದಳದ ಮುಖ್ಯಸ್ಥರೂ ಆದ ರಾಜ್ಯಪಾಲ ಎ.ಎಸ್.  ಎಲ್. ನರಸಿಂಹನ್ ಅವರನ್ನು ದೆಹಲಿಗೆ ಬುಲಾವ್ ಮಾಡಲಾಗಿದ್ದು, ಇವರು ರಾಜ್ಯದಲ್ಲಿನ ನೈಜ ಪರಿಸ್ಥಿತಿ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ವಿವರಣೆ ನೀಡಲಿದ್ದಾರೆ.

ಆನಂತರ ಕಾಂಗ್ರೆಸ್ ಪ್ರಮುಖರ ಸಭೆ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ರಾಜ್ಯಪಾಲರ ಅಭಿಪ್ರಾಯ ಪಡೆಯುವುದು ಅವಶ್ಯಕವಾಗಿರುವುದರಿಂದ ಅವರನ್ನು ದೆಹಲಿಗೆ ಬರಹೇಳಲಾಗಿದೆ. ಗುರುವಾರ ಸಂಜೆ ತಿರುಪತಿಯ ತಿರುಮಲದಲ್ಲಿ ಶ್ರೀಚಕ್ರ ಪೂಜೆ ಸಲ್ಲಿಸಲು ತೆರಳಿದ ರಾಜ್ಯಪಾಲರು, ಶುಕ್ರವಾರ ದೆಹಲಿಗೆ ತೆರಳುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.