ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆ ಮುಂದಿಟ್ಟು ಕಳೆದ ಒಂದು ತಿಂಗಳಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಸದಸ್ಯರೊಂದಿಗೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿ ಮಾತುಕತೆಗೆ ಮುಂದಾಗಿದ್ದರೂ ಮಹತ್ವದ ಬೆಳವಣಿಗೆ ಕಂಡುಬಂದಿಲ್ಲ.
ನೌಕಕರು, ಶಿಕ್ಷಕರು ಹಾಗೂ ಕಾರ್ಮಿಕರನ್ನು ಒಳಗೊಂಡ ಸಮಿತಿಯು ಮಾತುಕತೆಗೆ ಪೂರ್ವಷರತ್ತು ಹಾಕಿದೆ. ನೌಕರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬೇಕು, ಎಸ್ಮಾ ಕಾಯ್ದೆ ತೆಗೆದುಹಾಕಬೇಕು ಹಾಗೂ ಖೈರತಾಬಾದ್ನ ಆರ್ಟಿಎ ಕಚೇರಿಯಲ್ಲಿ ಜೆಎಸಿ ಮುಖಂಡ ಸ್ವಾಮಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಜೆಎಸಿ ಆಗ್ರಹಿಸಿದೆ.
`ಒಂದು ಕಡೆ ಸರ್ಕಾರ ನಮ್ಮನ್ನು ಮಾತುಕತೆಗೆ ಆಹ್ವಾನಿಸುತ್ತಿದೆ. ಇನ್ನೊಂದೆಡೆ ನಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದೆ. ಹಾಗಾಗಿ ಸಂಧಾನಕ್ಕೆ ವಾತಾವರಣ ಹಿತಕರವಾಗಿಲ್ಲ~ ಎಂದು ಸ್ವಾಮಿ ಗೌಡ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. `ಸರ್ಕಾರ ಜೆಎಸಿ ಬೇಡಿಕೆಯನ್ನು ಚರ್ಚಿಸಬೇಕಾಗುತ್ತದೆ. ಆ ನಂತರವಷ್ಟೇ ನಿರ್ಧಾರಕ್ಕೆ ಬರುತ್ತದೆ. ಇದಕ್ಕೆಲ್ಲ ಸಮಯ ಹಿಡಿಯುತ್ತದೆ~ ಎಂದು ರಾಜ್ಯ ಹಣಕಾಸು ಸಚಿವ, ನೌಕರರ ಕುಂದುಕೊರತೆಗೆ ಸಂಬಂಧಿಸಿದ ಸಂಪುಟ ಉಪಸಮಿತಿ ಸದಸ್ಯ ಆನಂ ರಾಮನಾರಾಯಣ ರೆಡ್ಡಿ ಹೇಳಿದ್ದಾರೆ.
ಈ ನಡುವೆ ತನ್ನ ಪಟ್ಟು ಬಿಡದ ಸರ್ಕಾರ, `ಗ್ರೂಪ್-2~ ಪರೀಕ್ಷೆಗಳು ನಿಗದಿಯಂತೆ ಇದೇ 15 ಹಾಗೂ 16ರಂದು ನಡೆಯಲಿವೆ. ಪ್ರತಿಭಟನಾಕಾರರ ಆಗ್ರಹದಂತೆ ಪರೀಕ್ಷೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ~ ಎಂದು ಸ್ಪಷ್ಟಪಡಿಸಿದೆ.
ತೆಲಂಗಾಣದ 10 ಜಿಲ್ಲೆಗಳಲ್ಲಿನ 204 ಕೇಂದ್ರಗಳಲ್ಲಿ ನಡೆಯಲಿರುವ ಈ ಪರೀಕ್ಷೆಯಲ್ಲಿ ಸುಮಾರು 2 ಲಕ್ಷ ಅಭ್ಯರ್ಥಿಗಳು ಪಾಲ್ಗೊಳ್ಳುವರು.
ಈ ಮಧ್ಯೆ, ಪ್ರತಿಭಟನೆಯಿಂದಾಗಿ ಸಾಮಾನ್ಯ ಜನ ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ಕಲ್ಲಿದ್ದಲು ಉತ್ಪಾದನೆ ಕುಂಠಿತವಾಗಿರುವುದರಿಂದ ವಿದ್ಯುತ್ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.