ಬೆಂಗಳೂರು: ತೋಟಗಾರಿಕಾ ಇಲಾಖೆಯಲ್ಲಿ ತೋಟಗಾರಿಕಾ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2010ರ ಸೆ.6ರಂದು ಕರೆದಿರುವ ಅಧಿಸೂಚನೆ ಅನ್ವಯ ಮುಂದಿನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಅಂಗವಿಕಲರ ರಕ್ಷಣೆಯ ರಾಜ್ಯ ಆಯೋಗ ಮಂಗಳವಾರ ಆದೇಶಿಸಿದೆ.
ಅಂಗವಿಕಲರ ರಕ್ಷಣೆ ಕಾಯ್ದೆ-1995 ಅಡಿ ಅಂಗವಿಕಲರಿಗೆ ಮೀಸಲು ಇಡಬೇಕಿರುವ ಸ್ಥಾನವನ್ನು ಕಾಯ್ದಿರಿಸಿ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸುವಂತೆ ಕೆಪಿಎಸ್ಸಿಗೆ ಆಯೋಗದ ಆಯುಕ್ತ ಕೆ.ವಿ.ರಾಜಣ್ಣ ಆದೇಶಿಸಿದ್ದಾರೆ.
418 ಹುದ್ದೆಗಳ ಭರ್ತಿಗೆ ಕರೆಯಲಾಗಿರುವ ಈ ಅಧಿಸೂಚನೆಯಲ್ಲಿ ನಿಯಮದ ಪ್ರಕಾರ ಅಂಗವಿಕಲರಿಗೆ ಮೀಸಲಾತಿ ನೀಡದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.
ಈಗ ಹೊರಡಿಸಿರುವ ಅಧಿಸೂಚನೆಯಲ್ಲಿ ಕುಷ್ಠರೋಗದಿಂದ ಮುಕ್ತರಾದವರಿಗೆ ಮಾತ್ರ ಮೀಸಲಾತಿ ನೀಡಲಾಗಿದೆ. ಆದರೆ ನಿಯಮದ ಪ್ರಕಾರ ಎಲ್ಲ ಬಗೆಯ ಅಂಗವಿಕಲರಿಗೆ ಶೇ 5ರಷ್ಟು ಮೀಸಲಾತಿ ನೀಡಬೇಕು. ಇದರ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಆಯೋಗಕ್ಕೆ ದೂರುಗಳು ಬಂದಿದ್ದವು.
ಈ ದೂರುಗಳ ಆಧಾರದ ಮೇಲೆ ಆಯೋಗವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತು. ಅಂಗವಿಕಲರಿಗೆ ಮೀಸಲಾತಿ ನೀಡದೇ ಇರುವುದು ‘ಅಂಗವಿಕಲರ ರಕ್ಷಣೆ ಕಾಯ್ದೆ’ ಮಾತ್ರವಲ್ಲದೇ ‘ಕರ್ನಾಟಕ ನಾಗರಿಕ ಸೇವಾ ಕಾಯ್ದೆ’ಯ ಉಲ್ಲಂಘನೆಯೂ ಆಗಿದೆ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ. ಈ ಸಂಬಂಧ ತೋಟಗಾರಿಕಾ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.