ADVERTISEMENT

ತ್ರಿವಳಿ ತಲಾಖ್ ಪ್ರಕರಣದಲ್ಲಿ ನ್ಯಾಯ ಲಭಿಸದೇ ಇದ್ದರೆ ಹಿಂದೂ ಧರ್ಮಕ್ಕೆ ಮತಾಂತರವಾಗುವೆ ಎಂದ ಮುಸ್ಲಿಂ ಮಹಿಳೆ

​ಪ್ರಜಾವಾಣಿ ವಾರ್ತೆ
Published 19 ಮೇ 2017, 10:50 IST
Last Updated 19 ಮೇ 2017, 10:50 IST
ಕೃಪೆ: ಟ್ವಿಟರ್ (ಎಎನ್‍ಐ)
ಕೃಪೆ: ಟ್ವಿಟರ್ (ಎಎನ್‍ಐ)   

ಉತ್ತರಾಖಂಡ: ತ್ರಿವಳಿ ತಲಾಖ್ ಪ್ರಕರಣದಲ್ಲಿ ತನಗೆ ನ್ಯಾಯ ಲಭಿಸದೇ ಇದ್ದರೆ, ಹಿಂದೂ ಧರ್ಮಕ್ಕೆ  ಮತಾಂತರವಾಗುವೆ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮುಸ್ಲಿಂ ಮಹಿಳೆಯೊಬ್ಬರು ಹೇಳಿದ್ದಾರೆ.

ಉತ್ತರಾಖಂಡದ ಉದ್ಧಂ ಸಿಂಗ್ ನಗರ ನಿವಾಸಿಯಾದ ಶಮೀಮ್ ಜಹಾನ್ ಎಂಬ ಮಹಿಳೆ ತ್ರಿವಳಿ ತಲಾಖ್‍ನಿಂದ ತೊಂದರೆ ಅನುಭವಿಸಿದ್ದು. ತನಗೆ ನ್ಯಾಯ ಒದಗಿಸಿಕೊಡಿ ಎಂದು ವಿಡಿಯೊ ಸಂದೇಶ ಮೂಲಕ ಮನವಿ ಮಾಡಿದ್ದಾರೆ.

ಶಮೀಮ್ ಅವರಿಗೆ ಪತಿ ಆಸಿಫ್ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದರು. ತ್ರಿವಳಿ ತಲಾಖ್‍‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ಶಮೀಮ್, ಈ ಕಷ್ಟ ಅನುಭವಿಸುವುದಕ್ಕಿಂತ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದೇ ಲೇಸು. ಇಲ್ಲದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ಪದ್ದತಿಯಿಂದ ನಾನು ಸಾಕಷ್ಟು ತೊಂದರೆ ಅನುಭವಿಸಿದ್ದೇನೆ ಎಂದಿರುವ ಈಕೆ ಪ್ರಧಾನಿ ಮೋದಿಯರಲ್ಲಿ ಸಹಾಯ ಬೇಡಿದ್ದಾರೆ.

ADVERTISEMENT

12 ವರ್ಷಗಳ ಹಿಂದೆ ಆಸಿಫ್ ಜತೆ ಶಮೀಮ್ ಜಹಾನ್ ಅವರ ವಿವಾಹ ನಡೆದಿತ್ತು. ಮದುವೆಯಾಗಿ 4ವರ್ಷಗಳ ನಂತರ ಆಸಿಫ್ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದರು. ಕುಟುಂಬದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿ, 40 ದಿನಗಳ ಹಲಾಲಾ ಅವಧಿ ಮುಗಿದ  ಮೇಲೆ ಈ ದಂಪತಿಗಳು ಒಂದಾಗಿದ್ದರು. ಇಬ್ಬರೂ ಜತೆಯಾಗಿ ಸಂಸಾರ ನಡೆಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ಆಸಿಫ್, ಶಮೀಮ್ ಅವರಿಗೆ ದೈಹಿಕ ಹಿಂಸೆ ನೀಡಲು ಶುರು ಮಾಡಿದ್ದಾರೆ.

ಪತಿಯಿಂದಾಗುತ್ತಿರುವ ದೌರ್ಜನ್ಯದ ಬಗ್ಗೆ ಶಮೀಮ್ ಗದಾರ್‍ಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಪೊಲೀಸ್ ಠಾಣೆಯಲ್ಲಿಯೇ ಆಸಿಫ್ ಮೂರು ಬಾರಿ ತಲಾಖ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.