ADVERTISEMENT

ದಲ್ಲಾಳಿಗಳಿಗೆ ‘ಡಿಜಿಟಲ್‌ ಇಂಡಿಯಾ’ ಅಂಕುಶ

ಫಲಾನುಭವಿಗಳ ಜತೆ ಸಂವಾದದಲ್ಲಿ ಪ್ರಧಾನಿ

ಪಿಟಿಐ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST
ದಲ್ಲಾಳಿಗಳಿಗೆ ‘ಡಿಜಿಟಲ್‌ ಇಂಡಿಯಾ’ ಅಂಕುಶ
ದಲ್ಲಾಳಿಗಳಿಗೆ ‘ಡಿಜಿಟಲ್‌ ಇಂಡಿಯಾ’ ಅಂಕುಶ   

ನವದೆಹಲಿ: ಜನರಿಂದ ಹಣ ಸುಲಿಯುವ ಮಧ್ಯವರ್ತಿಗಳ ಹಾವಳಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಡಿಜಿಟಲ್‌ ಇಂಡಿಯಾ’ ಸಂಪೂರ್ಣ ಕಡಿವಾಣ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಪ್ಪುಹಣ ಮತ್ತು ಕಾಳಸಂತೆಗಳಿಗೆ ಅಂಕುಶ ಹಾಕಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ‘ಡಿಜಿಟಲ್‌ ಇಂಡಿಯಾ’ ಕಾರ್ಯಕ್ರಮ ದಲ್ಲಾಳಿಗಳ ವಿರುದ್ಧ ಸಾರಿದ ಸಮರ ಎಂದು ಅವರು ಬಣ್ಣಿಸಿದ್ದಾರೆ.

ಡಿಜಿಟಲ್‌ ಇಂಡಿಯಾ’ ಫಲಾನುಭವಿಗಳ ಜತೆ ಶುಕ್ರವಾರ ಸಂವಾದ ನಡೆಸಿದ ಅವರು, ‘ಮಧ್ಯವರ್ತಿಗಳಿಗೆ ಸಿಂಹಸ್ವಪ್ನವಾಗಿರುವ ಮೋದಿಯನ್ನು ತೆಗಳಲು ಮಧ್ಯವರ್ತಿಗಳು ಸಿಕ್ಕ ಅವಕಾಶಗಳನ್ನೆಲ್ಲ  ಬಳಸಿಕೊಳ್ಳುತ್ತಿದ್ದಾರೆ’ ಎಂದರು.

ADVERTISEMENT

ಗ್ರಾಮೀಣ ಪ್ರದೇಶಗಳ ಬಡ ರೈತರು ಕೂಡ ಡಿಜಿಟಲ್‌ ಪಾವತಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಆದಾಯಕ್ಕೆ ಹೊಡೆತ ಬೀಳುವ ಭೀತಿಯಿಂದ ಮಧ್ಯವರ್ತಿಗಳು ಡಿಜಿಟಲ್‌ ವಹಿವಾಟು ಸುರಕ್ಷಿತವಲ್ಲ ಎಂಬ ಗಾಳಿಸುದ್ದಿ ಹರಡುತ್ತಿದ್ದಾರೆ ಎಂದು ದಲ್ಲಾಳಿಗಳ ವಿರುದ್ಧ ಹರಿಹಾಯ್ದರು.

ಈಗ ಪಡಿತರ ಚೀಟಿ ಪಡೆಯಲು ಮಧ್ಯವರ್ತಿಗಳ ಅಗತ್ಯವಿಲ್ಲ. ಶ್ರಮಕ್ಕೆ ತಕ್ಕ ಬೆಲೆ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತಿದೆ ಎಂದರು.

ಜೂನ್‌ 20ಕ್ಕೆ ರೈತರ ಜತೆ ಸಂವಾದ: ಕೃಷಿ ವಲಯದ ಬೆಳವಣಿಗೆ ಮತ್ತು ರೈತರನ್ನು ಬಾಧಿಸುತ್ತಿರುವ ಸಮಸ್ಯೆಗಳ ಕುರಿತು ಇದೇ 20ರಂದು ಬೆಳಿಗ್ಗೆ 9.30ಕ್ಕೆ ರೈತರ ಜತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸುವುದಾಗಿ ಮೋದಿ ತಿಳಿಸಿದ್ದಾರೆ.

ದೇಶದಲ್ಲಿರುವ ಮೂರು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ರೈತರ ಜತೆ ಸಂವಾದ ನಡೆಸುವುದಾಗಿ ಹೇಳಿದ್ದಾರೆ.

**

ದೇಶಸೇವೆಗಾಗಿ ಗಡಿಗಳಿಗೆ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ. ಹಾಗಾಗಿ ದೇಶೀಯವಾದ ರುಪೇ ಕಾರ್ಡ್‌ ಬಳಸುವ ಮೂಲಕ ದೇಶಸೇವೆ ಮಾಡಿ

ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.