ADVERTISEMENT

ದುಡಿಯದ ಅಧಿಕಾರಿಗಳಿಗೆ 15 ವರ್ಷದಲ್ಲೇ ನಿವೃತ್ತಿ: ಕೇಂದ್ರದ ಹೊಸ ನಿಯಮಾವಳಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 10:25 IST
Last Updated 7 ಫೆಬ್ರುವರಿ 2012, 10:25 IST

ನವದೆಹಲಿ (ಪಿಟಿಐ): ಕನಿಷ್ಠ 15 ವರ್ಷಗಳ ಸೇವೆ ಪೂರೈಸಿದ ಬಳಿಕ ~ಸಾರ್ವಜನಿಕ ಹಿತಕ್ಕಾಗಿ~ ಅಖಿಲ ಭಾರತ ಸೇವಾ ಅಧಿಕಾರಿಗಳನ್ನು ನಿವೃತ್ತಿಗೊಳಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಹೊಸ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ನಿಯಮಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಕಳೆದ ವಾರ ಪ್ರಕಟಿಸಿದ್ದು, ರಾಜ್ಯ ಸರ್ಕಾರಗಳ ಜೊತೆಗೆ ಸಮಾಲೋಚನೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ನಿಯಮಗಳ ಪ್ರಕಾರ ಕೇಂದ್ರ ಸರ್ಕಾರವು ಸಂಬಂಧಪಟ್ಟ ರಾಜ್ಯ ಸರ್ಕಾರದ ಸಮಾಲೋಚಿಸಿ ಸಾರ್ವಜನಿಕ ಹಿತಕ್ಕಾಗಿ 15 ವರ್ಷಗಳ ಸೇವೆ ಪೂರೈಸಿದ ಅಖಿಲ ಭಾರತ ಸೇವಾ ಅಧಿಕಾರಿಯನ್ನು ನಿವೃತ್ತಿಗೊಳಿಸಬಹುದು.

ಅಧಿಕಾರಿಯೊಬ್ಬರು 25 ವರ್ಷಗಳ ಸೇವೆ ಪೂರೈಸಿದ ಬಳಿಕ ಅಥವಾ ಅಧಿಕಾರಿ 50ನೇ ವಯಸ್ಸಿಗೆ ತಲುಪಿದ ಬಳಿಕ ಸರ್ಕಾರ ಪುನಃ ಅವರ ಸೇವೆ ಬಗ್ಗೆ ಮರುವಿಮರ್ಶೆ ಮಾಡಬಹುದು.

ಏನಿದ್ದರೂ ಅಂತಹ ಅಧಿಕಾರಿಗೆ ~ವಿದಾಯ~ ಹೇಳುವ ಮುನ್ನ  ಸರ್ಕಾರವು ಮೂರು ತಿಂಗಳ ಲಿಖಿತ ನೋಟಿಸ್ ನೀಡಬೇಕು ಇಲ್ಲವೇ ಮೂರು ತಿಂಗಳ ವೇತನ ಮತ್ತು ಭತ್ಯೆಗಳನ್ನು ನೀಡಬೇಕು ಎಂದು ಹೊಸ ನಿಯಮಾವಳಿ ಹೇಳುತ್ತದೆ.

ಅಖಿಲ ಭಾರತ ಸೇವೆಗಳು (ಸಾವು ಹಾಗೂ ನಿವೃತ್ತಿ ಲಾಭಗಳು) ನಿಯಮಗಳು, 1958ರ 16(3) ನಿಯಮದಲ್ಲಿ ಈ ವರ್ಷದ ಜನವರಿ 31ರಂದು ಪ್ರಕಟಣೆ ಮೂಲಕ ಇಲಾಖೆಯು ಈ ಬದಲಾವಣೆಗಳನ್ನು ಮಾಡಿದೆ.

ಹಿಂದಿನ ನಿಯಮಾವಳಿಗಳ ಪ್ರಕಾರ 30 ವರ್ಷಗಳ ಅರ್ಹ ಸೇವೆಯನ್ನು ಪೂರೈಸಿದ ಬಳಿಕ ಸೇವೆಯಿಂದ ನಿವೃತ್ತಿಯಾಗಲು ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ಅವಕಾಶ ಇತ್ತು. ನಿಯಮಾವಳಿಗಳು ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಕಂದಾಯ ಸೇವೆ (ಐಆರ್ ಎಸ್) ಮತ್ತು ಇತರರಿಗೆ ಅನ್ವಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.