ನವದೆಹಲಿ: ಉತ್ತರ ಭಾರತದಲ್ಲಿ ಉಂಟಾಗಿರುವ ದೂಳಿನ ಬಿರುಗಾಳಿಯಿಂದಾಗಿ ದೆಹಲಿಯಲ್ಲಿ ಸತತ ಮೂರನೇ ದಿನವೂ ವಾಯು ಗುಣಮಟ್ಟ ಗಂಭೀರ ಮಟ್ಟದಲ್ಲಿ ಕುಸಿದಿದೆ.
ಇನ್ನೂ ಮೂರರಿಂದ ನಾಲ್ಕು ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಮನೆಯಿಂದ ಹೊರಗಡೆ ಹೆಚ್ಚು ಹೊತ್ತು ಕಳೆಯದಂತೆ ಜನರಿಗೆ ಪರಿಸರ ಸಚಿವಾಲಯ ಎಚ್ಚರಿಕೆ ನೀಡಿದೆ.
ರಾಜಸ್ಥಾನದಲ್ಲಿ ಬೀಸಿದ ದೂಳಿನ ಬಿರುಗಾಳಿಗೆ ದೆಹಲಿ ವಾತಾವರಣದಲ್ಲಿ ದೂಳಿನ ಕಣದ ಪ್ರಮಾಣ ಮಿತಿ ಮೀರಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ನಿರ್ಮಾಣ ಚಟುವಟಿಕೆ ಸ್ಥಗಿತಕ್ಕೆ ಆದೇಶ: ದೆಹಲಿಯಾದ್ಯಂತ ಇದೇ 17ರವರೆಗೆ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ನಡೆಸಬಾರದು. ಎಲ್ಲ ರೀತಿಯ ನಿರ್ಮಾಣ ಚಟುವಟಿಕೆ ಸ್ಥಗಿತಗೊಳಿಸುವಂತೆ ಲೆಪ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಗುರುವಾರ ಆದೇಶ ಹೊರಡಿಸಿದ್ದಾರೆ.
ಸಚಿವ ಇಮ್ರಾನ್ ಹುಸೇನ್ ಮತ್ತು ಅಧಿಕಾರಿಗಳೊಂದಿಗೆ ಅವರು ತುರ್ತು ಸಭೆ ನಡೆಸಲಾಯಿತು. ಹೆಚ್ಚು ನಿಗಾ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ದೆಹಲಿ ಮೆಟ್ರೊ ರೈಲು ನಿಗಮ, ಲೋಕೋಪಯೋಗಿ ಇಲಾಖೆ, ದೆಹಲಿ ಮಹಾನಗರ ಪಾಲಿಕೆ, ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮಕ್ಕೆ (ಎನ್ಬಿಸಿಸಿ) ಸೂಚಿಸಲಾಗಿದೆ ಎಂದು ಲೆಪ್ಟಿನೆಂಟ್ ಗವರ್ನರ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.