ನವದೆಹಲಿ (ಪಿಟಿಐ): ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸೆ. 13ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವುದಾಗಿ ದೆಹಲಿ ನ್ಯಾಯಾಲಯವು ಬುಧವಾರ ತಿಳಿಸಿದೆ.
ಇದಕ್ಕೆ ಮುನ್ನ ಪ್ರಾಸಿಕ್ಯೂಟರ್ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಅಪರಾಧಿಗಳು ಆ ಕ್ಷಣ ಉತ್ತೇಜನಕ್ಕೆ ಒಳಗಾಗಿ ಅಪರಾಧ ಎಸಗಿರುವರೇ ಹೊರತು ಪೂರ್ವಾಲೋಚನೆಯಿಂದಲ್ಲ ಎಂದು ಅಪರಾಧಿಗಳ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಬಳಿಕ ನ್ಯಾಯಾಲಯವು ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಶುಕ್ರವಾರಕ್ಕೆ (ಸೆ. 13) ಕಾಯ್ದಿರಿಸಿತು. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ತಪ್ಪಿತಸ್ಥರು ಎಂದು ಮಂಗಳವಾರ ಘೋಷಿಸಿತ್ತು.
ಸಾಮೂಹಿಕ ಅತ್ಯಾಚರವೆಸಗಿದ ಆರು ಮಂದಿಯಲ್ಲಿ ಒಬ್ಬ ಆರೋಪಿ ಜೈಲಿನಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲ ಆರೋಪಿಯಾಗಿದ್ದು, ಈಗಾಗಲೇ ಬಾಲ ನ್ಯಾಯಮಂಡಳಿ ಆತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮುಕೇಶ್ (26), ವಿನಯ್ ಶರ್ಮಾ, (20), ಪವನ್ ಗುಪ್ತಾ (19), ಅಕ್ಷಯ್ ಸಿಂಗ್ ಠಾಕೂರ್ (28) ವಿರುದ್ಧ ಸಾಮೂಹಿಕ ಅತ್ಯಾಚಾರ, ಕೊಲೆ ಯತ್ನ, ಒಳಸಂಚು, ಅಸಹಜ ಲೈಂಗಿಕ ಕ್ರಿಯೆ, ದರೋಡೆ, ಸಾಕ್ಷ್ಯಾಧಾರ ನಾಶ, ಅಪಹರಣದ ಆರೋಪಗಳು ಸಾಬೀತಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.