ADVERTISEMENT

ದೇಣಿಗೆ ನಿಧಿ ದುರುಪಯೋಗ:ರಾಜೇಂದ್ರ ಸಿಂಗ್ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ):  ಪ್ರಬಲ ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸಿದ ಚಳವಳಿ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ದೇಣಿಗೆ ಹಣದ ವಿಷಯದಲ್ಲಿ ವಿವಾದಕ್ಕೆ ಸಿಲುಕಿರುವ ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಅವರು ತಾವು  ನಿರ್ದೋಷಿ ಎನ್ನುವುದನ್ನು ಸಾಬೀತು ಪಡಿಸಬೇಕು ಎಂದು `ಜಲ ಜಾಗೃತಿ~ ಆಂದೋಲನದ ಮುಖಂಡ ರಾಜೇಂದ್ರ ಸಿಂಗ್ ಒತ್ತಾಯ ಮಾಡಿದ್ದಾರೆ.

ಅಣ್ಣಾ ತಂಡದವರು ತಾವು ಪ್ರತಿಪಾದಿಸುವ ವಿಷಯದಲ್ಲಿ ಪಾರದರ್ಶಕವಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದೂ ಹೇಳಿದ್ದಾರೆ.

ಹಿಸ್ಸಾರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡುವ ಮೂಲಕ ಆಣ್ಣಾ ತಂಡ ಈಗ `ಪಕ್ಷ ರಾಜಕೀಯ~ ಮಾಡುತ್ತಿದೆ ಎಂದು ಆರೋಪಿಸಿದ ಸಿಂಗ್ ಈಚೆಗೆ ತಂಡದಿಂದ ಹೊರ ಬಂದಿದ್ದರು.
ಪಾರದರ್ಶಕತೆ ಬಗ್ಗೆ ಮಾತನಾಡುವ ಅಣ್ಣಾ ತಂಡದ ಸದಸ್ಯರು ಅದಕ್ಕೆ ವಿರುದ್ಧವಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಸಿಂಗ್, `ನಾವು ನುಡಿದಂತೆ ನಡೆಯಬೇಕು~ ಆದರೆ ಅದನ್ನು ಅವರು ಪಾಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಅಣ್ಣಾ ಚಳವಳಿ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ದೇಣಿಗೆ ವಿಷಯದಲ್ಲಿಯೂ ಪಾರದರ್ಶಕತೆಯ ಕೊರತೆ ಇದೆ ಎಂದು ಹೇಳಿರುವ ರಾಜೇಂದ್ರ ಸಿಂಗ್, ಈ ನಿಟ್ಟಿನಲ್ಲಿ ಅರವಿಂದ ಕೇಜ್ರಿವಾಲ್ ಅವರು ತಾವು ಕಳಂಕಿತರಲ್ಲ ಎನ್ನುವುದನ್ನು ಸಾಬೀತು ಪಡಿಸಬೇಕಾಗಿದೆ ಎಂದು ಹೇಳಿದರು.

ತಪ್ಪು ಮಾಡುವುದು ಮಾನವನ ಸಹಜಗುಣ. ಅದರಂತೆ ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ತಾವು ಮಾಡಿರುವುದು ತಪ್ಪು ಎಂದು ತಿಳಿದ ಕೂಡಲೇ ಅದನ್ನು ಸರಿಪಡಿಸಿಕೊಳ್ಳಬೇಕು. ಆದರೆ ಕೇಜ್ರಿವಾಲ್ ತಮ್ಮ ತಪ್ಪು ತಿದ್ದುಕೊಳ್ಳುವ ಮನಸ್ಸು ತೋರುತ್ತಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.