ರಾಯಪುರ : ಛತ್ತೀಸಗಡದ ಕಾಂಕರ್ ಜಿಲ್ಲೆಯಲ್ಲಿ ಬಿಜೆಪಿ ಸಂಸದ ವಿಕ್ರಂ ಉಸೆಂಡಿ ಅವರ ಒಡೆತನದ ತೋಟದ ಮನೆಯನ್ನು (ಫಾರ್ಮ್ ಹೌಸ್) ಮಂಗಳವಾರ ರಾತ್ರಿ ನಕ್ಸಲರು ಕಚ್ಚಾಬಾಂಬ್ ಬಳಸಿ ಸ್ಫೋಟಿಸಿದ್ದಾರೆ.
ಎರಡು ಕೊಠಡಿಗಳಿದ್ದ ಮನೆಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ. ನಕ್ಸಲರು ದಾಳಿ ನಡೆಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಫಾರ್ಮ್ಹೌಸ್ಗೆ ಸುಮಾರು 15 ಕಿ.ಮೀ. ಸಮೀಪದ ಅಂತಾಗರ್ಗೆ ‘ವಿಕಾಸ್ ಯಾತ್ರಾ’ ನಿಮಿತ್ತ ಮುಖ್ಯಮಂತ್ರಿ ರಮಣ್ ಸಿಂಗ್ ಬುಧವಾರ ಭೇಟಿ ನೀಡಿದ್ದರು.
ರಾಜಧಾನಿ ರಾಯಪುರದಿಂದ ಸುಮಾರು 240 ಕಿ.ಮೀ. ದೂರದ ಬೊಂದನರ್ ಗ್ರಾಮದಿಂದ ಕಳೆದ ರಾತ್ರಿ ನಕ್ಸಲರ ಒಂದು ಗುಂಪು ಬಂದು ದಾಳಿ ಮಾಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿದೆ. ನಕ್ಸಲರು ಕಾವಲುಗಾರನಿಗೆ ಬೆದರಿಕೆ ಹಾಕಿ, ಸ್ಥಳದಿಂದ ಓಡಿಸಿದ್ದಾರೆ. ನಂತರ ಫಾರ್ಮ್ಹೌಸ್ ಸ್ಫೋಟಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.