ADVERTISEMENT

ನಕ್ಸಲರಿಗೆ ನೀಡಿದ ಭರವಸೆ ಈಡೇರಿಸಲು ಬದ್ಧ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 16:35 IST
Last Updated 25 ಫೆಬ್ರುವರಿ 2011, 16:35 IST

ಭುವನೇಶ್ವರ (ಪಿಟಿಐ): ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಅವರನ್ನು ಒತ್ತೆಯಿಂದ ಬಿಡುಗಡೆ ಮಾಡಿಸಿಕೊಳ್ಳುವಾಗ ಸಂಧಾನಕಾರರ ಮೂಲಕ ಮಾವೊವಾದಿಗಳಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಒಡಿಶಾ ಸರ್ಕಾರ ತಿಳಿಸಿದೆ.

ಸಂಧಾನಕಾರರಾಗಿ ಕಾರ್ಯನಿರ್ವಹಿಸಿದ್ದ ಪ್ರೊ. ಹರಗೋಪಾಲ್, ಪ್ರೊ. ಆರ್.ಸೋಮೇಶ್ವರ್ ರಾವ್ ಮತ್ತು ದಂಡಪಾಣಿ ಮೊಹಂತಿ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರನ್ನು ಭೇಟಿ ಮಾಡಿ ಸಂದರ್ಭದಲ್ಲಿ ಈ ಭರವಸೆ ನೀಡಲಾಗಿದೆ. ಐದು ದಿನಗಳ ಕಾಲ ನಡೆದ ಸಂಧಾನ ಮಾತುಕತೆಯಲ್ಲಿ ಐದು ವಿಚಾರಗಳ ಬಗ್ಗೆ ಎರಡೂ ಕಡೆಯೂ ಒಪ್ಪಿಕೊಳ್ಳಲಾಗಿದೆ ಹಾಗೂ ಸರ್ಕಾರ ನೀಡಿರುವ ಭರವಸೆಗಳನ್ನು ತಪ್ಪದೆ ಈಡೇರಿಸಲಾಗುತ್ತದೆ ಎಂದು ಪಟ್ನಾಯಿಕ್ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಅವರನ್ನು ಒತ್ತೆಯಾಗಿಟ್ಟುಕೊಂಡು ಮುಂದಿಟ್ಟ ಹೆಚ್ಚುವರಿ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ.ಆದಿವಾಸಿಗಳ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ಮೂರು ತಿಂಗಳಲ್ಲಿ ವಾಪಸ್ ಪಡೆಯಲಾಗುವುದು ಮತ್ತು ಪ್ರಮುಖ ಮಾವೊವಾದಿ ಮುಖಂಡರ ವಿರುದ್ಧದ ಪ್ರಕರಣ ಕೈಬಿಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.