ಹೈದರಾಬಾದ್: ನಕ್ಸಲೀಯರ ಸಂಘಟನೆ ಮತ್ತು ಅವರು ನಡೆಸುವ ದಾಳಿಗೆ ಹಣಕಾಸಿನ ನೆರವು ಒದಗಿಸಿರುವ ಆರೋಪವನ್ನು ತೆಲುಗಿನ ಕ್ರಾಂತಿಕಾರಿ ಲೇಖಕ ವರವರ ರಾವ್ ಶನಿವಾರ ತಳ್ಳಿ ಹಾಕಿದ್ದಾರೆ.
‘ಮಾಧ್ಯಮಗಳಿಂದ ಈ ವಿಷಯ ತಿಳಿದು ಬಂದಿದೆ. ಪುಣೆ ಪೊಲೀಸರು ನಮ್ಮನ್ನು ಇನ್ನೂ ಸಂಪರ್ಕಿಸಿಲ್ಲ’ ಎಂದು ಅವರು ಹೇಳಿದ್ದಾರೆ.
ಕೋರೆಗಾಂವ್ ದಲಿತ ಹೋರಾಟಕ್ಕೆ ಮಾವೊವಾದಿ ಪಕ್ಷ ಮತ್ತು ನಕ್ಸಲೀಯರ ಜತೆ ನಂಟು ಕಲ್ಪಿಸುವ ಮೂಲಕ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೋರಾಟದ ಹಾದಿಯ ದಿಕ್ಕು ತಪ್ಪಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಶಕ್ತಿಗಳನ್ನು ಹತ್ತಿಕ್ಕಲು ಹೊರಟಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಕಾರ್ಯಕರ್ತ ರೋನಾ ಜಾಕೋಬ್ ವಿಲ್ಸನ್ ಅವರ ದೆಹಲಿಯ ಮನೆಯಿಂದ ವಶಪಡಿಸಿಕೊಳ್ಳಲಾದ ಪತ್ರಗಳಲ್ಲಿ ವರವರ ರಾವ್ ಅವರ ಹೆಸರು ಪ್ರಸ್ತಾಪವಾಗಿದೆ ಎಂದು ಪುಣೆಯ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮೋದಿ ಹತ್ಯೆ ಸಂಚಿನ ಪ್ರಕರಣದಲ್ಲಿ ಪುಣೆ ಪೊಲೀಸರು ಬಂಧಿಸಿರುವ ಯಾರಿಗೂ ಹಿಂಸೆಯಲ್ಲಿ ನಂಬಿಕೆ ಇಲ್ಲ. ಅವರೆಲ್ಲರೂ ಶಾಂತಿಪ್ರಿಯರು. ಎಲ್ಲರೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು. ಯಾವುದೇ ಕಾರಣಕ್ಕೂ ಹಿಂಸೆಯನ್ನು ಒಪ್ಪುವವರಲ್ಲ. ಅಗಾಧ ಸಾಮಾಜಿಕ ಕಳಕಳಿಯುಳ್ಳ ಅವರೆಲ್ಲರೂ ಮಹಿಳೆಯರು, ಆದಿವಾಸಿಗಳು ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ತಮ್ಮ ಜೀವನ ಮುಡುಪಿಟ್ಟವರು’ ಎಂದು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.