ADVERTISEMENT

ನಾಯರ್, ಬಾಹ್ಯಾಕಾಶ ಇಲಾಖೆಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 15 ಮೇ 2012, 19:30 IST
Last Updated 15 ಮೇ 2012, 19:30 IST

ನವದೆಹಲಿ (ಪಿಟಿಐ): ವಿವಾದಾತ್ಮಕ ಅಂತರಿಕ್ಷ್- ದೇವಾಸ್ ಒಪ್ಪಂದದ್ಲ್ಲಲಿ,  ನಿಯಮಾವಳಿಗಳನ್ನು ಗಾಳಿಗೆ ತೂರಿ,  ಖಾಸಗಿ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಅನೇಕ ಸಂಗತಿಗಳನ್ನು ಮುಚ್ಚಿಟ್ಟಿದ ಕಾರಣಕ್ಕೆ, ಬಾಹ್ಯಾಕಾಶ ಇಲಾಖೆಯನ್ನು,  ವಿಶೇಷವಾಗಿ ಅದರ ಮಾಜಿ ಕಾರ್ಯದರ್ಶಿ ಜಿ. ಮಾಧವನ್ ನಾಯರ್ ಅವರನ್ನು ಮಹಾಲೇಖ     ಪಾಲರು (ಸಿಎಜಿ) ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

`ಸೇವೆಯಲ್ಲಿರುವ ಕೆಲವೇ ಆಯ್ದ ವ್ಯಕ್ತಿಗಳು ಹಾಗೂ ನಿವೃತ್ತ ಸರ್ಕಾರಿ ಅಧಿಕಾರಿಗಳು ಸೇರಿ ತಮ್ಮ ವ್ಯಾಪ್ತಿಯಲ್ಲಿ  ಇಲ್ಲದ ಅಧಿಕಾರವನ್ನೂ ತಾವೇ ಚಲಾಯಿಸಿ ಆಡಳಿತ ವ್ಯವಸ್ಥೆಯನ್ನು ಹೇಗೆ ವಿಫಲಗೊಳಿಸುತ್ತಾರೆ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನೆ~ ಎಂದು `ಸಿಎಜಿ~ ವರದಿ ಚಾಟಿ ಬೀಸಿದೆ.

ಹಲವು ಮಹತ್ವದ ಸ್ಥಾನಗಳಿಗೆ ನೇಮಕವಾಗಿದ್ದ ನಾಯರ್ ಅವರು ಹಿತಾಸಕ್ತಿಗಳ ಸಂಘರ್ಷಕ್ಕೆ ಒಳಗಾಗಿದ್ದಾರೆ. ನಿಯಂತ್ರಣ ಹಾಗೂ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಬೇರೆ ಬೇರೆ ಮಹತ್ವದ ಸ್ಥಾನಗಳಿಗೆ  ಅನ್ಯ ವ್ಯಕ್ತಿಗಳನ್ನು ನೇಮಕ ಮಾಡಿದ್ದರೆ ಇದನ್ನು ತಪ್ಪಿಸಬಹುದಿತ್ತು ಎಂದು ಮಂಗಳವಾರ ಸಂಸತ್ತಿನಲ್ಲಿ ಮಂಡನೆಯಾದ `ಸಿಎಜಿ~ ವರದಿಯಲ್ಲಿ ಹೇಳಲಾಗಿದೆ.

ದೇವಾಸ್ ಸಂಸ್ಥೆಗೆ ಅನಿಯಮಿತ ಅವಧಿಗೆ ನೀಡಲಾದ 70 ಮೆಗಾಹರ್ಟ್ಜ್ ಎಸ್- ಬ್ಯಾಂಡ್ ತರಂಗಾಂತರದಿಂದ ಬರಬಹುದಾದ ಆದಾಯವನ್ನು ಸರಿಯಾಗಿ ಅಂದಾಜು ಮಾಡದಿರುವುದಕ್ಕೂ ಬಾಹ್ಯಾಕಾಶ ಇಲಾಖೆಯನ್ನು ವರದಿಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಮೆಸರ್ಸ್ ಫೋರ್ಜ್ ಅಡ್ವೈಸರ್ಸ್‌ನ ಪ್ರಸ್ತಾವಗಳನ್ನು ಪರಿಶೀಲಿಸಲು `ಇಸ್ರೊ~ ಅಧ್ಯಕ್ಷರಾಗಿದ್ದ ನಾಯರ್ ಅವರು ಶಂಕರ್ ಸಮಿತಿಯನ್ನು ನೇಮಿಸಿದರು. ಇದೇ ವೇಳೆ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದ ನಾಯರ್ ಅವರು, ಮಹತ್ವದ ಅಂಶಗಳನ್ನು ಮುಚ್ಚಿಟ್ಟ ಟಿಪ್ಪಣಿಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿದ್ದರು ಎನ್ನುವುದರತ್ತಲೂ ಎಂದು ಸಿಎಜಿ ಬೆಟ್ಟು ಮಾಡಿದೆ.

ಜಿಸ್ಯಾಟ್-6 ಮತ್ತು 6ಎ ಉಪಗ್ರಹಗಳಿಗೆ ಅನುಮತಿ ದೊರೆತ ಸಭೆಗಳ ಅಧ್ಯಕ್ಷತೆಯನ್ನು ಅಂತರಿಕ್ಷ ಆಯೋಗದ ಅಧ್ಯಕ್ಷರಾಗಿ ನಾಯರ್ ವಹಿಸಿದ್ದರು ಎಂದೂ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.