ನವದೆಹಲಿ (ಪಿಟಿಐ): ಸರ್ಕಾರದ ಉದ್ಯೋಗ ನೀತಿಗಳಿಂದಾಗಿ ಜಾಗತಿಕ ಆರ್ಥಿಕ ಹಿಂಜರಿಕೆಯ ಹೊರತಾಗಿಯೂ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಕೇಂದ್ರ ಹೇಳಿದೆ.
ಆರ್ಥಿಕ ಹಿಂಜರಿಕೆ ಕಾಲದಲ್ಲಿ ಭಾರತ ಕೇವಲ ತನ್ನ ಉದ್ಯೋಗದ ಮಟ್ಟ ಕಾಯ್ದುಕೊಂಡಿಲ್ಲ. ನಿರುದ್ಯೋಗ ಸಮಸ್ಯೆ ತಗ್ಗಿಸುವಲ್ಲಿಯೂ ಯಶಸ್ವಿಯಾಗಿದೆ.
2004-05ರಲ್ಲಿ ಶೇ 8.3ರಷ್ಟಿದ್ದ ನಿರುದ್ಯೋಗ ಪ್ರಮಾಣ 2009-10ರಲ್ಲಿ 6.6ರಷ್ಟು ಇಳಿದಿದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸಾರ್ವಜನಿಕ ಉದ್ಯೋಗ ನೀತಿ ಹಾಗೂ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ತೆಗೆದುಕೊಂಡ ಕೆಲ ಉತ್ತೇಜನಾ ಕ್ರಮಗಳಿಂದ ಇದು ಸಾಧ್ಯವಾಗಿದೆ. ನಿರುದ್ಯೋಗ ಸಮಸ್ಯೆ ತಗ್ಗಿಸಲು ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತಹ (ಎನ್ಆರ್ಇಜಿಎ) ಕಾರ್ಯಕ್ರಮ ಹಮ್ಮಿಕೊಂಡಿತು ಹಾಗೂ ರಾಷ್ಟ್ರೀಯ ಉದ್ಯೋಗ ನೀತಿಯನ್ವಯ ಹೊಸ ಉದ್ಯೋಗಾವಕಾಶ ಸೃಷ್ಟಿಸಲಾಯಿತು ಎಂದು ಅವರು ವಿವರಿಸಿದರು.
`ಸಾರ್ವಜನಿಕ ಉದ್ಯೋಗ ಯೋಜನೆಗಳಲ್ಲಿ ಹೊಸತನ~ ಎಂಬ ವಿಚಾರದ ಕುರಿತು ಗುರುವಾರ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಸಮಾವೇಶದಲ್ಲಿ ವಿವಿಧ ದೇಶಗಳ 30ಕ್ಕೂ ಹೆಚ್ಚು ಕಾರ್ಮಿಕ ಸಚಿವರು ಪಾಲ್ಗೊಂಡಿದ್ದಾರೆ.
ಈ ಸಮಾವೇಶದಿಂದ ಅಭಿವೃದ್ಧಿಶೀಲ ದೇಶಗಳಿಗೆ ಉದ್ಯೋಗ ಯೋಜನೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.