ನವದೆಹಲಿ: ಕೃಷಿಯನ್ನು ಉತ್ತೇಜಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ನೀರಾವರಿಗೆಂದು ₹ 5,000 ಕೋಟಿ ಮೊತ್ತದ ನಿಧಿಯನ್ನು ಸ್ಥಾಪಿಸಲು ಕೇಂದ್ರ ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ಸೇರಿದ್ದ ಹಣಕಾಸು ವ್ಯವಹಾರಗಳ ಸಂಪುಟ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದೆ.
ಏಳು ಕೋಟಿ ಹೆಕ್ಟೇರ್ನಷ್ಟು ಕೃಷಿ ಭೂಮಿಗೆ ನೀರಾವರಿಯನ್ನು ವಿಸ್ತರಿಸುವ ಉದ್ದೇಶದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಈ ನಿಧಿಯನ್ನು ಸ್ಥಾಪಿಸಲಾಗುತ್ತದೆ. 2018–19ನೇ ಸಾಲಿನಲ್ಲಿ ₹ 2,000 ಕೋಟಿಯನ್ನು ಮಂಜೂರು ಮಾಡಲಾಗುತ್ತದೆ. 2019–20ನೇ ಸಾಲಿನಲ್ಲಿ ₹ 3,000 ಕೋಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಮಿತಿಯು ತಿಳಿಸಿದೆ.
ಸೇನೆ ಸಂಪರ್ಕಕ್ಕೆ ಹಣ ದುಪ್ಪಟ್ಟು: ಸೇನೆಗೆ ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸುವ ‘ನೆಟ್ವರ್ಕ್ ಆಫ್ ಸ್ಪೆಕ್ಟ್ರಂ’ ಯೋಜನೆಯ ಮೊತ್ತವನ್ನು ಕೇಂದ್ರ ಸಂಪುಟ ಸಮಿತಿಯು ₹ 24,664 ಕೋಟಿಗೆ ಏರಿಕೆ ಮಾಡಿದೆ.
ಈ ಯೋಜನೆಯನ್ನು ಭಾರತೀಯ ದೂರ ಸಂಚಾರ ನಿಗಮವು ಅನುಷ್ಠಾನಗೊಳಿಸುತ್ತಿದೆ. ಈ ಮೊದಲು ಯೋಜನೆಗೆ ₹ 13,334 ಕೋಟಿ ಮೊತ್ತ ನಿಗದಿ ಮಾಡಲಾಗಿತ್ತು. ಈಗ ಅದಕ್ಕೆ ಹೆಚ್ಚುವರಿಯಾಗಿ ₹ 11,330 ಕೋಟಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆಂಧ್ರಕ್ಕೆ ಕೇಂದ್ರೀಯ ವಿ.ವಿ: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಜಂತಲೂರಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮೊದಲ ಹಂತದಲ್ಲಿ ₹ 450
ಕೋಟಿ ನೀಡಲು ಸಮಿತಿ ಒಪ್ಪಿಗೆ ಸೂಚಿಸಿದೆ.
ಪರಿಷತ್ ಬದಲಿಗೆ ಮಂಡಳಿ: ಈಗ ಇರುವ ಕೇಂದ್ರೀಯ ಹೋಮಿಯೊಪಥಿ ಪರಿಷತ್ನ ಬದಲಿಗೆ ಆಡಳಿತ ಮಂಡಳಿಯನ್ನು ರಚಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ. ಪರಿಷತ್ನ ಸದಸ್ಯರು ಲಂಚ ಪಡೆದ ಮತ್ತು ಭಾರಿ ಪ್ರಮಾಣದಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪ ಇರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಪುಟವು ಹೇಳಿದೆ.
*
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ನಿಧಿ ಸ್ಥಾಪನೆ
2018–19ನೇ ಸಾಲಿನಲ್ಲಿ
₹ 2,000 ಮಂಜೂರು
2019–20ನೇ ಸಾಲಿನಲ್ಲಿ
₹ 3,000 ಮಂಜೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.