ಬೆಂಗಳೂರು: ನೇಕಾರರಿಗೆ ನೂಲಿನ ಕೊರತೆ ಆಗುವುದನ್ನು ತಪ್ಪಿಸಲು ರಾಜ್ಯದಲ್ಲಿ ‘ನೂಲು ಬ್ಯಾಂಕ್’ ಸ್ಥಾಪಿಸಲಾಗುವುದು ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಹೇಳಿದರು.
‘ಐ–ಪವರ್ ಟೆಕ್ಸ್ ಇಂಡಿಯಾ’ ಆನ್ಲೈನ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನೂಲು ಬ್ಯಾಂಕ್ ಸ್ಥಾಪನೆಗೆ ₹ 5 ಕೋಟಿ ನೀಡಲಾಗುವುದು. ಅಗತ್ಯವಿದ್ದರೆ ಒಂದಕ್ಕಿಂತ ಹೆಚ್ಚು ‘ನೂಲು ಬ್ಯಾಂಕ್’ಗಳನ್ನು ಸ್ಥಾಪಿಸಲು ಸಿದ್ಧವಿರುವುದಾಗಿ ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ನೇಕಾರರಿಗೆ ನೂಲಿನ ಕೊರತೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಭೂಮಿ ಕೊಟ್ಟರೆ ಜವಳಿ ಪಾರ್ಕ್: ರಾಜ್ಯ ಸರ್ಕಾರ ಭೂಮಿ ಕೊಟ್ಟರೆ ಜವಳಿ ಪಾರ್ಕ್ ಸ್ಥಾಪಿಸಲು ಸಿದ್ಧ. ಅಲ್ಲಿ ಉದ್ಯಮ ಸ್ಥಾಪಿಸುವವರಿಗೆ ಶೇ 40 ರಷ್ಟು ಸಹಾಯ ಧನ ನೀಡಲಾಗುವುದು ಎಂದು ಅವರು ಹೇಳಿದರು.
ನೇಕಾರಿಕೆಯಲ್ಲಿ ತೊಡಗಿರುವ ಬಡ ಕುಟುಂಬಗಳ ಯುವಕ– ಯುವತಿಯರು ದೂರ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ ಪಡೆಯಲು ನೆರವು ನೀಡಲಾಗು ವುದು. ಇದಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 75ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಸ್ಮೃತಿ ತಿಳಿಸಿದರು.
ವಿದ್ಯುತ್ ಮಗ್ಗಗಳನ್ನು ಮೇಲ್ದರ್ಜೆಗೇರಿಸಲು ₹20,000 ನೆರವು ನೀಡಲಾಗುವುದು. ಸೌರ ವಿದ್ಯುತ್ ಅಳವಡಿಸಲು ಶೇ 50 ರಷ್ಟು ಸಹಾಯಧನ ನೀಡಲಾಗು ವುದು. ಮುದ್ರಾ ಯೋಜನೆಯಡಿ ಶೇ4 ಬಡ್ಡಿ ದರದಲ್ಲಿ ಉದ್ಯಮ ಸ್ಥಾಪಿಸಲು ಸಾಲ ನೀಡಲಾಗುವುದು ಎಂದರು.
ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ಮಾತನಾಡಿ, ರಾಜ್ಯಕ್ಕೆ ಜವಳಿ ಪಾರ್ಕ್ ಮಂಜೂರು ಮಾಡಬೇಕು. ಇದರಿಂದ ರಾಜ್ಯದಲ್ಲಿ ಜವಳಿ ಉದ್ಯಮದ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.