ADVERTISEMENT

ನೊಬೆಲ್ ಶಾಂತಿ ಪ್ರಶಸ್ತಿ: ಗುವಾಹಟಿ ಆರ್ಚ್ ಬಿಷಪ್ ಥಾಮಸ್ ನಾಮಕರಣ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ಗುವಾಹಟಿ (ಪಿಟಿಐ): ಈಶಾನ್ಯ ಪ್ರಾಂತ್ಯದ ಬುಡಕಟ್ಟು ಸಮುದಾಯದವರಲ್ಲಿ ಶಾಂತಿ ನೆಲೆಸಲು ಶ್ರಮಿಸಿದ ಇಲ್ಲಿನ ಆರ್ಚ್ ಬಿಷಪ್ ಥಾಮಸ್ ಮೇನಾಮ್‌ಪರಂಪಿಲ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮಕರಣ ಮಾಡಲಾಗಿದೆ.

ಇಟಲಿಯ ಜನಪ್ರಿಯ ನಿಯತಕಾಲಿಕವೊಂದು ತನ್ನ ಜೂನ್ ಸಂಚಿಕೆಯಲ್ಲಿ ಮೇನಾಮ್‌ಪರಂಪಿಲ್ ಅವರ ಕುರಿತಂತೆ `ಎ ಬಿಷಪ್ ಫಾರ್ ನೊಬೆಲ್ ಪ್ರೈಸ್~ ಶೀರ್ಷಿಕೆಯಡಿ ನಾಲ್ಕು ಪುಟಗಳ ಲೇಖನವನ್ನು ಪ್ರಕಟಿಸಿದ್ದು ಇದೇ ನಿಯತಕಾಲಿಕವು ಪ್ರಶಸ್ತಿಗೆ ಆರ್ಚ್ ಬಿಷಪ್ ಅವರ ಹೆಸರನ್ನು ಸೂಚಿಸಿದೆ.

`ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ಇದರಿಂತ ಸಂತೋಷವಾಗಿದೆ. ಕಳೆದ ತಿಂಗಳು ನಾನು ರೋಮ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಸಾಧ್ಯತೆ ಬಗ್ಗೆ ನನಗೆ ಹೇಳಲಾಗಿತ್ತು~ ಎಂದು ಮೇನಾಮ್‌ಪರಂಪಿಲ್ ಸೋಮವಾರ ಹೇಳಿದ್ದಾರೆ.

`ಯಾವುದೇ ಮಾನ್ಯತೆ ಅಥವಾ ಪ್ರಶಸ್ತಿ ನನಗೆ ಸಿಗಲಿ ಅಥವಾ ಸಿಗದಿರಲಿ ನಾನು ಶಾಂತಿ ಮೂಡಿಸುವ ಕಾರ್ಯವನ್ನು ಮುಂದುವರಿಸುತ್ತೇನೆ. ಸಮಾಜದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡಲು ತಾಳ್ಮೆ, ಪರಸ್ಪರ ಗೌರವದ ಗುಣ ಇಂದಿನ ಅಗತ್ಯ~ ಎಂದು ಅವರು ಹೇಳಿದ್ದಾರೆ.

ಕಳೆದ 15 ವರ್ಷಗಳಲ್ಲಿ ಮೇನಾಮ್‌ಪರಂಪಿಲ್ ಅವರು ಏಳು ಪ್ರಮುಖ ಶಾಂತಿ ಪ್ರಕ್ರಿಯೆಯನ್ನು ಕೈಗೊಂಡು ಸಫಲರಾಗಿದ್ದಾರೆ.

ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾದಲ್ಲಿ ಜನಿಸಿದ 74 ವರ್ಷದ ಮೇನಾಮ್‌ಪರಂಪಿಲ್ ಅವರು ಅಸ್ಸಾಂನ ದಿಬ್ರುಗರ್ ಪಟ್ಟಣದಲ್ಲಿ ಬಿಷಪ್ ಆಗಿದ್ದು 1995ರಲ್ಲಿ ಗುವಾಹಟಿಯ ಆರ್ಚ್‌ಬಿಷಪ್ ಆಗಿ ನೇಮಕಗೊಂಡರು.

ಸಾರ್ವಜನಿಕ ಜೀವನದಲ್ಲಿ ಶಾಂತಿ ಮತ್ತು ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಅವರು `ಹೊಣೆಗಾರಿಕೆಯ ಪ್ರಜ್ಞೆಯತ್ತ~ ಎಂಬ ಪುಸ್ತಕವನ್ನೂ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.