ನವದೆಹಲಿ: ರದ್ದಾದ ಗರಿಷ್ಠ ಮುಖಬೆಲೆಯ ನೋಟುಗಳನ್ನು ಕಳೆದ ಡಿ. 30ರ ಗಡುವಿನ ಒಳಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಇದೇ 31ರವರೆಗೆ ಯಾಕೆ ಅವಕಾಶ ಕೊಟ್ಟಿಲ್ಲ ಎಂದು ಆರ್ಬಿಐಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ರದ್ದುಪಡಿಸಿರುವ ನೋಟುಗಳನ್ನು ಸಕಾರಣವಿದ್ದರೆ 2017ರ ಮಾರ್ಚ್ 31ರ ವರೆಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8ರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡುವಾಗ ತಿಳಿಸಿದ್ದರು.
ಆದರೆ ಸುಗ್ರೀವಾಜ್ಞೆ ಹೊರಡಿಸಿದಾಗ ಪ್ರಧಾನಿ ಅವರ ಈ ಭರವಸೆಯನ್ನು ಅದರಲ್ಲಿ ಸೇರಿಸಿಲ್ಲ. ಹಾಗಾಗಿ ಅನೇಕ ಜನರು ತೊಂದರೆಗೆ ಒಳಗಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.