ADVERTISEMENT

ನ್ಯಾಯ ಸಿಗುವ ವಿಶ್ವಾಸವಿಲ್ಲ: ಸಂಜೀವ್ ಭಟ್ ಕುಟುಂಬದ ಆತಂಕ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 8:55 IST
Last Updated 1 ಅಕ್ಟೋಬರ್ 2011, 8:55 IST

ಅಹಮದಾಬಾದ್ (ಪಿಟಿಐ): ಅಮಾನತುಗೊಂಡ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಬಂಧನದ ನಂತರ ಅವರ ಕುಟುಂಬ ವರ್ಗದವರಲ್ಲಿ  ಸಂಜೀವ್ ಭಟ್ ಅವರ ಪ್ರಾಣದ ಬಗ್ಗೆ ಆತಂಕ ಮೂಡಿದ್ದು ತಮಗೆ ನ್ಯಾಯ ಒದಗಿಸುವಂತೆ ಕೋರಿ ಗುಜರಾತ್‌ ಪೋಲಿಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಸಂಜೀವ್ ಅವರನ್ನು ಭೇಟಿಯಾಗಲು ನನಗೆ ಶುಕ್ರವಾರದಿಂದ ಅವಕಾಶ ನೀಡುತ್ತಿಲ್ಲ. ಪೋಲಿಸ್ ಅಧಿಕಾರಿಗಳು ನನಗೆ ಮಾತ್ರವಲ್ಲ, ವಕೀಲರಿಗೂ ಸಂಜೀವ್ ಅವರನ್ನು ಭೇಟಿಮಾಡಲು ಸಮ್ಮತಿಸುತ್ತಿಲ್ಲ. ಹೀಗಿರುವಾಗ ನಾವು ಹೇಗೆ ಅವರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯ ಎಂದು ಸಂಜೀವ್ ಭಟ್ ಪತ್ನಿ ಶ್ವೇತ ಭಟ್ ಪ್ರಶ್ನಿಸಿದರು.

27 ಫೆಬ್ರುವರಿ 2002 ರಲ್ಲಿ ನರೇಂದ್ರ ಮೋದಿ ಅವರು ಕರೆದಿದ್ದ  ಸಭೆಯಲ್ಲಿ ತಮ್ಮನ್ನು ಬೆದರಿಸಿದ ಹಾಗೂ ಸುಳ್ಳು ಪ್ರಮಾಣ ಪತ್ರಕ್ಕೆ ಸಹಿ ಹಾಕಿಸಿದ್ದಂತೆ ಸಂಬಂಧಿಸಿ ಪೊಲೀಸ್ ಪೇದೆ ಕೆ.ಡಿ. ಪಂತ್ ಅವರು ಸಲ್ಲಿಸಿದ ದೂರನ್ನು ಅನುಸರಿಸಿ ಸಂಜೀವ ಭಟ್ ಅವರನ್ನು ಬಂಧಿಸಲಾಗಿದೆ.

ಯಾವುದೇ ಮಾಹಿತಿ ನೀಡದೆ ಶುಕ್ರವಾರ 35 ರಿಂದ 40ಸಂಖ್ಯೆಯಲ್ಲಿದ್ದ ಪೊಲೀಸರು ಎರಡು ಗಂಟೆಗಳಿಗೂ ಅಧಿಕ ಕಾಲ ನಮ್ಮ ಮನೆಯ ಮೇಲೆ ದಾಳಿ ನಡೆಸಿ, ಸಂಜೀವ್ ಭಟ್ ಅವರನ್ನು ಕರೆದೊಯ್ದರು. ಆ ಬಳಿಕ ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಭಟ್ ಪತ್ನಿ ವಿವರಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT