ADVERTISEMENT

ಪಂಪ್‌ಸೆಟ್‌ಗೆ ಉಚಿತ್ ವಿದ್ಯುತ್ ಬೇಡ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ನವದೆಹಲಿ: ವಿದ್ಯುತ್ ದರ ಹೆಚ್ಚಿಸಲು ಹಾಗೂ ಸಬ್ಸಿಡಿ ಹಣವನ್ನು ವಿದ್ಯುತ್ತಿಗೆ ಬದಲಾಗಿ ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಬಳಸಲು ರಾಜ್ಯ ಸರ್ಕಾರಗಳಿಗೆ ಯೋಜನಾ ಆಯೋಗ ಮಂಗಳವಾರ ಸಲಹೆ ನೀಡಿದೆ.

ರಾಜ್ಯಗಳ ಇಂಧನ ಸಚಿವರುಗಳ ಸಮಾವೇಶದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೀಗೆ ಹೇಳಿ, ದರ ಹೆಚ್ಚಳದಿಂದ ಸಂಕಷ್ಟದಲ್ಲಿರುವ ವಿದ್ಯುತ್ ವಲಯದ ಅಭಿವೃದ್ಧಿ ಸಾಧ್ಯ ಎಂದರು.

ಕೃಷಿಗಾಗಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದರೆ ಅಂತರ್ಜಲವನ್ನು ಅತಿಯಾಗಿ ಸೆಳೆಯಲಾಗುತ್ತದೆ. ಹೀಗಾಗಿ ಉಚಿತ್ ವಿದ್ಯುತ್ ನೀಡುವ ಬದಲು, ನಿರ್ದಿಷ್ಟ ದರ ನಿಗದಿ ಮಾಡಿ ಗುಣಮಟ್ಟದ ವಿದ್ಯುತ್ ನೀಡಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಮುಂಚಿನಿಂದಲೂ ಉಚಿತ್ ವಿದ್ಯುತ್ ವಿರೋಧಿಯಾದ ಸಿಂಗ್ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಗಳು, ಕಾಲ ಕಾಲಕ್ಕೆ ನಿಯಮಿತವಾಗಿ, ವಿದ್ಯುತ್ ಶುಲ್ಕವನ್ನು ಪರಿಷ್ಕರಿಸಬೇಕು. ವಿದ್ಯುತ್ ಪ್ರಸರಣ ಕಂಪೆನಿಗಳು ಆರ್ಥಿಕವಾಗಿ ಸಮರ್ಥವಾಗುವಂತೆ ನೋಡಿಕೊಳ್ಳುವುದು ರಾಜ್ಯಗಳ ಹೊಣೆ. ವಿದ್ಯುತ್ ವಲಯವನ್ನು ಆರ್ಥಿಕವಾಗಿ ಸುಸ್ಥಿರಗೊಳಿಸದಿದ್ದರೆ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ರಾಜಕೀಯವಾಗಿ ಸೂಕ್ಷವಾದ ಪ್ರದೇಶಗಳಲ್ಲಿ ನಷ್ಟ ಭರಿಸುವ ಸಲುವಾಗಿ ವಿದ್ಯುತ್ ಪ್ರಸರಣಕ್ಕಾಗಿ ಫ್ರಾಂಚೈಸಿ ವ್ಯವಸ್ಥೆಯನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಇದಕ್ಕೆ ಮುನ್ನ ನಡೆದ ಸಭೆಯಲ್ಲಿ ಕೇಂದ್ರ ವಿದ್ಯುತ್ ಸಚಿವ ಸುಶೀಲ್ ಕುಮಾರ್ ಶಿಂಧೆ ಮಾತನಾಡಿ, ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಬೇಕೆಂದು ಕೋರಿದರು.
ವಿದ್ಯುತ್ ಪ್ರಸರಣ ಕಂಪೆನಿಗಳನ್ನು ಆರ್ಥಿಕವಾಗಿ ಸಮರ್ಥಗೊಳಿಸುವ ಬಲು ದೊಡ್ಡ ಸವಾಲು ನಮ್ಮ ಮುಂದಿದೆ. ಪ್ರಸ್ತುತ ಈ ಕಂಪೆನಿಗಳ ಒಟ್ಟು ನಷ್ಟ ಒಂದು ಲಕ್ಷ ಕೋಟಿ ರೂಪಾಯಿ ಇದೆ ಎಂದರು.

ವಿದ್ಯುತ್ ಪ್ರಸರಣ ಕಂಪೆನಿಗಳಿಗೆ ನೆರವು ನೀಡಲು 2 ಲಕ್ಷ ಕೋಟಿ ರೂಪಾಯಿಗಳ ಸಾಲ ಪರಿಹಾರ ಪ್ಯಾಕೇಜ್ ಪ್ರಕಟಿಸುವ ಉದ್ದೇಶವನ್ನು ಕೇಂದ್ರ ಹೊಂದಿದ್ದು, ಇದು ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟದ ಮುಂದೆ ಬರಲಿದೆ. ಈಗಿನ ಪ್ರಸ್ತಾವದ ಪ್ರಕಾರ, ಒಟ್ಟು ಸಾಲದಲ್ಲಿ ಶೇ 50ರಷ್ಟನ್ನು ಬಾಂಡ್‌ಗಳನ್ನಾಗಿ ಪರಿವರ್ತಿಸಲಾಗುವುದು. ಈ ಬಾಂಡ್‌ಗಳನ್ನು ರಾಜ್ಯ ಸರ್ಕಾರಗಳು ವಿತರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.