ಲಖನೌ: ಉತ್ತರ ಪ್ರದೇಶದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಫುಡ್ ಪಾರ್ಕ್ನ್ನು ಸ್ಥಳಾಂತರ ಮಾಡುವುದಾಗಿ ಪತಂಜಲಿ ಚಿಂತನೆ ನಡೆಸಿದೆ ಎಂಬ ಸುದ್ದಿ ತಿಳಿದ ಕೂಡಲೇ ಆ ಯೋಜನೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಚುರುಕುಗೊಳಿಸುವಂತೆ ಯೋಗಿ ಆದಿತ್ಯನಾಥ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಯಮುನಾ ಎಕ್ಸ್ ಪ್ರೆಸ್ ಹೈವೇ ಬಳಿ ₹6,000 ಕೋಟಿ ವೆಚ್ಚದ ಫುಡ್ ಪಾರ್ಕ್ ನಿರ್ಮಿಸಲು ಬಾಬಾ ರಾಮ್ದೇವ್ ಅವರ ಪತಂಜಲಿ ಕಂಪನಿ ಯೋಜನೆ ಸಿದ್ದಪಡಿಸಿತ್ತು. ಆದರೆ ಈ ಯೋಜನೆಗೆ ಉತ್ತರ ಪ್ರದೇಶ ಸಹಕರಿಸುತ್ತಿಲ್ಲ. ಹಾಗಾಗಿ ನಾವು ಫುಡ್ ಪಾರ್ಕ್ನ್ನು ಉತ್ತರ ಪ್ರದೇಶದಲ್ಲಿ ಆರಂಭಿಸುವ ಯೋಜನೆಯಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಪತಂಜಲಿಯ ಕಾರ್ಯ ನಿರ್ವಾಹಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಹೇಳಿದ್ದರು.
[related]
ಆದರೆ ಯೋಜನೆಗೆ ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಉತ್ತರ ಪ್ರದೇಶದ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಸಚಿವ ಸತೀಶ್ ಮಹಾನ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿದ ಉತ್ತರ ಪ್ರದೇಶ ಸರ್ಕಾರದ ವಕ್ತಾರ, ಸದ್ಯ ಯೋಜನೆಯನ್ನು ರದ್ದು ಮಾಡಿಲ್ಲ. ಆದಿತ್ಯನಾಥ ಅವರು ಆಚಾರ್ಯ ಬಾಲಕೃಷ್ಣ ಅವರಲ್ಲಿ ಮಾತನಾಡಿದ್ದಾರೆ. ಇಲ್ಲಿಯವರೆಗೆ ಫುಡ್ ಪಾರ್ಕ್ ರದ್ದು ಮಾಡುವ ವಿಚಾರದ ಬಗ್ಗೆ ತೀರ್ಮಾನ ಆಗಿಲ್ಲ. ನಾವು ಈಗಾಗಲೇ ಇದಕ್ಕೆ ಬೇಕಾಗಿರುವ ಸ್ಥಳವನ್ನು ನೀಡಿದ್ದು, ಈ ಯೋಜನೆ ಕಾರ್ಯಗತವಾಗಲಿದೆ ಎಂದು ಪ್ರಧಾನ ಕಾರ್ಯದರ್ಶಿ (ಮಾಹಿತಿ) ಅವಾಂಶಿ ಅವಸ್ತಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.