ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಸುದ್ದಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಬಳಿ ಬಂದ ವ್ಯಕ್ತಿಯೊಬ್ಬರು ಮೋದಿ ಮೋದಿ ಎಂದು ಕೂಗಿದ್ದಾರೆ. ಸೋಮವಾರ ಬೆಂಗಳೂರಿನ ಹೋಟೆಲ್ವೊಂದರಲ್ಲಿ ಸರ್ದೇಸಾಯಿ ತಿಂಡಿ ತಿನ್ನುತ್ತಿದ್ದ ವೇಳೆ ಅಲ್ಲಿಗೆ ಬಂದ ನರೇಂದ್ರ ಮೋದಿಯ ಅಭಿಮಾನಿಯೊಬ್ಬರು 'ನೀವು ಹುಟ್ಟಿರುವುದು ಭಾರತದಲ್ಲಿ. ಹಿಂದೂಗಳನ್ನು ದ್ವೇಷಿಸಬೇಡಿ' ಎಂದು ಕೂಗಿರುವ ದೃಶ್ಯವೊಂದು ಮೊಬೈಲ್ನಲ್ಲಿ ಸೆರೆಯಾಗಿದೆ. ಮೋದಿ ಅಭಿಮಾನಿ ಈ ರೀತಿ ವರ್ತಿಸಿದಾಗ ಅಲ್ಲಿದ್ದ ಜನರೆಲ್ಲರೂ ಸರ್ದೇಸಾಯಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಸರ್ದೇಸಾಯಿ ಅವರನ್ನು ಕೆಣಕಲೆಂದೇ ಬಂದ ಆ ವ್ಯಕ್ತಿ ಬೊಬ್ಬೆ ಹಾಕುವಾಗ ನಿಮಗೆ ಸಭ್ಯತೆ ಇಲ್ಲವೆ? ಎಂದು ಸರ್ದೇಸಾಯಿ ಪ್ರಶ್ನಿಸಿದ್ದಾರೆ. ಆಗ ಆ ವ್ಯಕ್ತಿ ಸಭ್ಯತೆ ಇಲ್ಲದಿರುವುದು ನಿಮಗೆ, ನೀವು ಸುದ್ದಿಗಳಲ್ಲಿ ಬಹಳಷ್ಟು ಕೀಳುಮಟ್ಟದ ವಿಷಯ ಹಂಚುತ್ತಿದ್ದೀರಿ ಎಂದಿದ್ದಾರೆ.
ಈ ವಿಡಿಯೊ ದೃಶ್ಯವನ್ನು ಬೆಂಗಳೂರಿನಲ್ಲಿ ರಾಜ್ದೀಪ್ ಅವರ ಮೆಡಿಸನ್ ಸ್ಕ್ವೇರ್ ಕ್ಷಣಗಳು ಎಂಬ ಶೀರ್ಷಿಕೆ ನೀಡಿ ಗಿರೀಶ್ ಆಳ್ವ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.