ADVERTISEMENT

‘ಪರಿಸರ ಸ್ನೇಹಿ ಪಟಾಕಿ’ ತಯಾರಿಸಲು ಚಿಂತನೆ

ಎಲ್ಲ ಮಹಾನಗರಗಳಲ್ಲೂ ಪಟಾಕಿ ಮಾರಾಟ ನಿಷೇಧಕ್ಕೆ ಪರಿಸರವಾದಿಗಳ ಒತ್ತಾಯ

ಪಿಟಿಐ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
‘ಪರಿಸರ ಸ್ನೇಹಿ ಪಟಾಕಿ’ ತಯಾರಿಸಲು ಚಿಂತನೆ
‘ಪರಿಸರ ಸ್ನೇಹಿ ಪಟಾಕಿ’ ತಯಾರಿಸಲು ಚಿಂತನೆ   

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಪಟಾಕಿ ಮಾರಾಟ ಮಾಡುವುದನ್ನು ಸುಪ್ರೀಂಕೋರ್ಟ್‌ ನಿಷೇಧಿಸಿರುವುದರಿಂದ ’ಪರಿಸರ ಸ್ನೇಹಿ ಪಟಾಕಿ’ ತಯಾರಿಸುವ ಬಗ್ಗೆ  ಚಿಂತನೆ ನಡೆದಿದೆ.

ಪಟಾಕಿ ಉದ್ಯಮದ ಪ್ರಮುಖ ಕೇಂದ್ರವಾದ ತಮಿಳುನಾಡಿನ ಶಿವಕಾಶಿಯಲ್ಲಿ ಪ್ರತಿ ವರ್ಷ ಅಂದಾಜು ₹5ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ನ್ಯಾಯಾಲಯದ ತೀರ್ಪು ಈ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ತಯಾರಕರು ಈಗ ‘ಪರಿಸರ ಸ್ನೇಹಿ ಪಟಾಕಿ’ ಅಥವಾ ಕಡಿಮೆ ಮಾಲಿನ್ಯವನ್ನುಂಟು ಮಾಡುವ ಪಟಾಕಿ ತಯಾರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ADVERTISEMENT

‘ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬಳಿಕ ಸಕಾರಾತ್ಮಕವಾಗಿಯೂ ಚಿಂತನೆ ನಡೆಸುತ್ತಿದ್ದೇವೆ. ಹಸಿರು ಪಟಾಕಿಯನ್ನು ನಾವು ಏಕೆ ತಯಾರಿಸಬಾರದು. ಇಂತಹ ಅವಕಾಶಗಳ ಬಗ್ಗೆ ಆಲೋಚನೆ ನಡೆಸುತ್ತಿದ್ದೇವೆ’ ಎಂದು ಕಾಲಿಶ್ವರಿ ಫೈರ್‌ವರ್ಕ್ಸ್‌ನ ಎ.ಪಿ. ಸೆಲ್ವರಾಜ್‌ ತಿಳಿಸಿದ್ದಾರೆ.

‘ಹಸಿರು ಪಟಾಕಿ ಅಥವಾ ಕಡಿಮೆ ಹೊಗೆ ಬರುವ ಪಟಾಕಿ ತಯಾರಿಸುವುದು ಸವಾಲಿನ ಕೆಲಸ. ಹೊಗೆ ರಹಿತ ಪಟಾಕಿಗಳನ್ನು ತಯಾರಿಸಲು ರಾಸಾಯನಿಕಗಳು ದೊರೆಯುತ್ತವೆ. ಈ ಬಗ್ಗೆ ತಜ್ಞರ ಜತೆಯೂ ಚರ್ಚಿಸುತ್ತೇವೆ’ ಎಂದು ಹೇಳಿದ್ದಾರೆ.

ದೆಹಲಿಯಂತೆ ದೇಶದ ಎಲ್ಲ ಮಹಾನಗರಗಳಲ್ಲಿಯೂ ಪಟಾಕಿ ಮಾರಾಟಕ್ಕೆ ನಿಷೇಧ ಹೇರಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

‘ಖಾಸಗಿಯಾಗಿ ಪಟಾಕಿ ಹಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೆಲವು ಸಂದರ್ಭಗಳಲ್ಲಿ ನಿರ್ಬಂಧ ವಿಧಿಸಿ ಅವಕಾಶ ನೀಡಬಹುದು’ ಎಂದು ಮುಂಬೈನ ಅವಾಜ್‌ ಪ್ರತಿಷ್ಠಾನದ ಸುಮೈರಾ ಅಬ್ದುಲಾಲಿ ಅಭಿಪ್ರಾಯಪಟ್ಟಿದ್ದಾರೆ.

‘ದೀಪಾವಳಿಯಂತಹ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಲು ರಾಜ್ಯ ಸರ್ಕಾರಗಳು ಪ್ರತ್ಯೇಕವಾದ ಬಯಲು ಪ್ರದೇಶವನ್ನು ನಿಗದಿಪಡಿಸಬೇಕು. ಜತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮುಂಬೈನ ಪರಿಸರವಾದಿ ಸುರೈಯಾ ಆರ್ಟೇಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.