ADVERTISEMENT

ಪರಿಹಾರ ನಕಾರ ಸರಿಯಲ್ಲ: ಸುಪ್ರೀಂ ಕೋರ್ಟ್ ತೀರ್ಪು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 17:40 IST
Last Updated 20 ಫೆಬ್ರುವರಿ 2011, 17:40 IST

ನವದೆಹಲಿ (ಪಿಟಿಐ): ತಡವಾಗಿ ಎಫ್‌ಐಆರ್ ದಾಖಲು ಮಾಡಿಸಿರುವ ಏಕೈಕ ಕಾರಣವೊಂದನ್ನು ಮುಂದಿಟ್ಟುಕೊಂಡು ಪರಿಹಾರ ನೀಡಲು ನಿರಾಕರಿಸಿರುವುದು ಸರಿಯಲ್ಲ ಎಂದು 9 ವರ್ಷಗಳ ಹಿಂದೆ ನಡೆದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ  ಸುಪ್ರೀಂಕೋರ್ಟ್  ತೀರ್ಪು ನೀಡಿದೆ.

2001ರ ಅಕ್ಟೋಬರ್ 7ರಂದು ರವಿ ಎಂಬುವರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಘಟನೆ ನಡೆದ ಎರಡು ತಿಂಗಳ ಬಳಿಕ ಅವರ ತಂದೆ ಚಾಲಕನ ವಿರುದ್ಧ ದೂರು ದಾಖಲಿಸಿದ್ದರು. ಮತ್ತು ಮೋಟಾರು ಅಪಘಾತ ಹಕ್ಕು ನ್ಯಾಯಮಂಡಳಿಗೆ ಪರಿಹಾರಕ್ಕಾಗಿ ಕೋರಿದ್ದರು.ಆದರೆ, ನ್ಯಾಯಮಂಡಳಿ ಇವರ ಕೋರಿಕೆಯನ್ನು ಮನ್ನಿಸಲಿಲ್ಲ. ಅನಂತರ ಅವರು ಜೈಪುರ ಹೈಕೋರ್ಟ್ ಮೊರೆ ಹೋಗಿದ್ದರು.. ಆದರೆ ಕೋರ್ಟ್ ಇವರ ಮನವಿಯನ್ನು ತಿರಸ್ಕರಿಸಿತ್ತು. ಅನಂತರ ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿರುವ ಒಂದೇ ಕಾರಣಕ್ಕೆ ಪರಿಹಾರ ನೀಡಲು ನಿರಾಕರಿಸಿರುವುದು ಸರಿಯಲ್ಲ. ಅಪಘಾತದಲ್ಲಿ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕನ ಕುಟುಂಬಕ್ಕೆ 2.5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ದಲವೀರ್ ಭಂಡಾರಿ ಮತ್ತು ದೀಪಕ್‌ವರ್ಮಾ ಆದೇಶ ನೀಡಿದ್ದಾರೆ.

’ಕೇವಲ ತಡವಾಗಿ ಎಫ್‌ಐಆರ್ ದಾಖಲಿಸಿದ್ದನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವುದು ಸರಿಯಲ್ಲ. ಕೆಲವೊಮ್ಮೆ ಗೊತ್ತಿಲ್ಲದೇ ಹೀಗೆ ಆಗುತ್ತದೆ ಎಂದಿರುವ ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ನ್ಯಾಯಮಂಡಳಿ ಅಂತಿಮ ತೀರ್ಪು ನೀಡುವಾಗ ತಪ್ಪಿವೆ ಎಂದಿದೆ. ತಪ್ಪು ಎಸಗಿದ ಟ್ರಕ್ ಮಾಲೀಕನಿಂದ ಬಾಲಕನಿಗೆ 2.5 ಲಕ್ಷ ರೂಪಾಯಿ ಪರಿಹಾರ ಕೋಡಿಸಬೇಕೆಂದು ರಾಷ್ಟ್ರೀಯ ವಿಮಾ ನಿಗಮಕ್ಕೆ ಕೋರ್ಟ್ ಸೂಚಿಸಿದೆ.

ಅಪಘಾತ ಜರುಗಿದ ನಂತರ ಭಾರತದಲ್ಲಿ ಸಾಮಾನ್ಯ ಮನುಷ್ಯನೊಬ್ಬ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುತ್ತಾನೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಬಾಲಕ ಗಾಯಗೊಂಡಿರುವ ರೀತಿ ನೋಡಿದರೆ ಆತ ಜೀವಮಾನವಿಡೀ ಅಂಗವೈಕಲ್ಯದಿಂದ ನರಳಬೇಕಾಗಿದೆ. ಹಾಗಾಗಿ ಕೂಡಲೇ ಆತನಿಗೆ  2.5 ಲಕ್ಷ ರೂ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.