ನವದೆಹಲಿ (ಪಿಟಿಐ): ಗುಜರಾತ್ನ ಮಾಜಿ ಸಚಿವ ಹರೇನ್ ಪಾಂಡ್ಯ ಹತ್ಯೆ ಪ್ರಕರಣದ ಆರೋಪಿಗಳನ್ನು ಖುಲಾಸೆ ಮಾಡಿರುವ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಬಯಸಿರುವ ಸಿಬಿಐ, ಈ ಪ್ರಕರಣದ ವಿವರವನ್ನು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಸೋಮವಾರ ಸಲ್ಲಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಗೃಹ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ಉದ್ದೇಶಿಸಿದ ವಿಶೇಷ ಮೇಲ್ಮನವಿ ಪ್ರಸ್ತಾವದ ವಿವರಗಳೂ ಇವೆ ಎಂದು ಸಿಬಿಐ ಮೂಲಗಳು ಹೇಳಿವೆ.
ವಿಶೇಷ ಮೇಲ್ಮನವಿ ಪ್ರಸ್ತಾವದ ಬಗ್ಗೆ ಸಿಬಿಐನಲ್ಲಿ ಒಮ್ಮತವಿಲ್ಲ; ಭಿನ್ನಾಭಿಪ್ರಾಯವಿದೆ ಎಂದೂ ಮೂಲಗಳು ತಿಳಿಸಿವೆ.ಹರೇನ್ ಪಾಂಡ್ಯ ಅವರನ್ನು ಅಹಮದಾಬಾದ್ನ `ಲಾ ಗಾರ್ಡನ್~ ಪ್ರದೇಶದಲ್ಲಿ 2003ರ ಮಾ. 26ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಿಬಿಐ ಈ ಪ್ರಕರಣದ ತನಿಖೆ ನಡೆಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸಿಬಿಐ ಆರೋಪ ಪಟ್ಟಿ ಸಲ್ಲಿಸಿದ 12 ಮಂದಿಯನ್ನು ನಿರ್ದೋಷಿಗಳೆಂದು ತೀರ್ಪು ನೀಡಿತ್ತು. ಇದನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿಯಿತು. ಹೈಕೋರ್ಟ್ ಊರ್ಜಿತಗೊಳಿಸಿದ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಬಯಸಿದ ಸಿಬಿಐ ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವಿವರಣೆ ನೀಡಿದೆ.
ಈ ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಹರೇನ್ ಪಾಂಡ್ಯ ಅವರ ಪತ್ನಿ ಜಾಗೃತಿ ಪಾಂಡ್ಯ ಒತ್ತಾಯಿಸಿದ್ದಾರೆ.`ಹರೇನ್ ಹತ್ಯೆಯಾಗಿ ಎಂಟು ವರ್ಷವಾಯಿತು. ನನಗೂ ಸಹಿಸಿ ಸಹಿಸಿ ಸಾಕಾಗಿದೆ. ನಿಜವಾದ ಕೊಲೆಗಡುಕರು ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂಬುದನ್ನು ಹೈಕೋರ್ಟ್ ತೀರ್ಪು ಸಾಬೀತು ಮಾಡಿದೆ. ಬೇರೆ ಯಾರ ಮೇಲೆ ಆರೋಪ ಹೊರೆಸಿ ಸೆರೆಯಲ್ಲಿ ಹಾಕಲಾಗಿತ್ತು.ಅವರು ವಿನಾಕಾರಣ ಸೆರೆವಾಸ ಅನುಭವಿಸುವಂತಾಯಿತು~ ಎಂದು ಜಾಗೃತಿ ಪಾಂಡ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.