ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದ ಆರೋಪಿಗಳಾದ ನೀರವ್ ಮೋದಿ ಹಾಗೂ ಮತ್ತವರ ಚಿಕ್ಕಪ್ಪ ಮುಹುಲ್ ಜೋಕ್ಸಿ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಲಾಗಿದೆ.
ಈ ಸಂಬಂಧ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಇಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ದೊಡ್ಡ ಮೊತ್ತದ ವಂಚನೆ ಮಾಡಿರುವ ಈ ಪ್ರಕರಣವನ್ನು ವಿಶೇಷ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ, ನಕಲಿ ಎಲ್ಒಯು ಬಳಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ₹ 13 ಸಾವಿರ ಕೋಟಿಗಳಷ್ಟು ವಂಚನೆ ಎಸಗಿದ್ದಾರೆ. ದೇಶದ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣ ಇದಾಗಿದೆ.
ಆಮದು ವಹಿವಾಟಿಗೆ ನೀಡಲಾಗುವ ಸಾಲಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ಗಳು ವಿತರಿಸುತ್ತಿದ್ದ ಸಾಲ ಮರುಪಾವತಿ ಖಾತರಿ ಪತ್ರಗಳಿಗೆ (ಎಲ್ಒಯು) ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧ ವಿಧಿಸಿತ್ತು. ‘ಎಲ್ಒಯು’ಗಳ ದುರ್ಬಳಕೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ನೀರವ್ ಮತ್ತು ಚೋಕ್ಸಿ ಅವರಿಗೆ ಸೇರಿದ ಸಂಸ್ಥೆಗಳು, ‘ಪಿಎನ್ಬಿ’ಯ ಮುಂಬೈನ ಬ್ರ್ಯಾಡಿ ಹೌಸ್ ಶಾಖೆಯ ಸಿಬ್ಬಂದಿ ನೆರವಿನಿಂದ ನಕಲಿ ಎಲ್ಒಯು ಪಡೆದು ವಂಚನೆ ಎಸಗಿವೆ. ವಿದೇಶಗಳಲ್ಲಿ ಇರುವ ಭಾರತದ ಬ್ಯಾಂಕ್ ಶಾಖೆಗಳಿಂದ ಸಾಲ ಪಡೆಯಲು ಇವುಗಳನ್ನು ಬಳಸಿಕೊಳ್ಳಲಾಗಿತ್ತು.
‘2011ರಲ್ಲಿಯೇ ಈ ವಂಚನೆಗೆ ಚಾಲನೆ ನೀಡಲಾಗಿತ್ತು. ನೀರವ್, 74 ತಿಂಗಳಲ್ಲಿ ಇಂತಹ 1,212 ನಕಲಿ ಎಲ್ಒಯುಗಳನ್ನು ಪಡೆದು ವಂಚಿಸಿದ್ದಾರೆ’ ಎಂದು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಗೆ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.