ನವದೆಹಲಿ (ಪಿಟಿಐ): ಸಂಸತ್ತಿನ ಮಹತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ದಕ್ಕುವ ಸಾಧ್ಯತೆ ಇದೆ. ಆದರೆ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ಆ ಪಕ್ಷಕ್ಕೆ ಸಿಗುವುದು ಇನ್ನೂ ನಿಶ್ಚಿತವಾಗಿಲ್ಲ.
ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಶೇ 10ರಷ್ಟು ಸ್ಥಾನ ಗೆಲ್ಲಲು ವಿಫಲವಾದ ಕಾಂಗ್ರೆಸ್ಗೆ ಇನ್ನೂ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕತ್ವ ಲಭ್ಯವಾಗಿಲ್ಲ. ಒಂದೊಮ್ಮೆ ಕಾಂಗ್ರೆಸ್ ಶೇ 10ರಷ್ಟು ಸ್ಥಾನ ಗೆದ್ದಿದ್ದರೆ ಅದು ಪ್ರಮುಖ ಪ್ರತಿಪಕ್ಷವಾಗುತ್ತಿತ್ತು. ಅಲ್ಲದೇ, ಲೋಕಸಭೆಯಲ್ಲಿ ಆ ಪಕ್ಷದ ನಾಯಕರಾದವರು ಪ್ರಮುಖ ನೇಮಕಾತಿಗಳ ನಿರ್ಧಾರದಲ್ಲಿ ಭಾಗಿಯಾಗಿರುತ್ತಿದ್ದರು. ಆದರೆ, ಈಗ ಅಂತಹ ಸನ್ನಿವೇಶ ಇಲ್ಲ. ಹೀಗಾಗಿ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾದವರನ್ನೇ ಲೋಕಪಾಲ ನೇಮಕಾತಿಯಂತಹ ಪ್ರಮುಖ ನಿರ್ಧಾರಗಳಲ್ಲಿ ಭಾಗಿಯಾಗಿಸಿಕೊಳ್ಳಲಾಗುವುದೇ ಎಂಬ ಬಗ್ಗೆ ಸರ್ಕಾರ ಯಾವುದೇ ಆಶ್ವಾಸನೆ ನೀಡಿಲ್ಲ.
‘ಪಿಎಸಿ ರಚನೆಯಲ್ಲಿ ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬುದು ನನ್ನ ಅಭಿಪ್ರಾಯ. ಇದನ್ನು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ಗೆ ನೀಡಬೇಕು ಎಂಬುದನ್ನು ನಾನು ಬೆಂಬಲಿಸುತ್ತೇನೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯನಾಯ್ಡು ಗುರುವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
‘ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕ ಯಾರಾಗಬೇಕೆಂಬುದನ್ನು ನಿರ್ಧರಿಸುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದು ಕಾನೂನು ಸಚಿವಾಲಯಕ್ಕೆ ಸಂಬಂಧಪಟ್ಟಿದ್ದಾಗಿದೆ. ಸ್ಪೀಕರ್ ಅವರು ಪೂರ್ವ ನಿದರ್ಶನಗಳನ್ನು ಕೂಲಂಕಷವಾಗಿ ಅವಲೋಕಿಸಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದರು.
‘ಉಪ ಸ್ವೀಕರ್ ಹುದ್ದೆ ಕಾಂಗ್ರೆಸ್ಗೆ ಹೋಗಲಿದೆಯೇ ಎಂದು ಕೇಳಿದಾಗ, ‘ಪ್ರತಿಪಕ್ಷಗಳ ಪೈಕಿ ಯಾವ ಪಕ್ಷಕ್ಕೆ ನೀಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದೇನೆ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.
‘ಹಣಕಾಸು ಸ್ಥಾಯಿ ಸಮಿತಿಯು ಪ್ರತಿಪಕ್ಷಗಳಿಗೆ ಹೋಗುತ್ತದೆ. ಕಾಂಗ್ರೆಸ್, ಎಐಎಡಿಎಂಕೆ, ಟಿಎಂಸಿ, ಬಿಜೆಡಿ ಪ್ರಮುಖ ವಿರೋಧ ಪಕ್ಷಗಳಾಗಿವೆ. ಈ ಪಕ್ಷಗಳ ನಾಯಕರ ಜತೆ ಚರ್ಚೆ ನಡೆಸುತ್ತಿದ್ದೇನೆ’ ಎಂದೂ ನಾಯ್ಡು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.