ADVERTISEMENT

ಪಿಐಒ ನಿಯಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಬರೇಲಿ (ಪಿಟಿಐ): ಭಾರತೀಯ ಮೂಲದ ವ್ಯಕ್ತಿ (ಪಿಐಒ) ಭಾರತಕ್ಕೆ ಭೇಟಿ ನೀಡುವುದಕ್ಕೆ ವೀಸಾ ಹೊಂದಿರಬೇಕಾದ ಅಗತ್ಯವಿಲ್ಲ ಎಂಬ ನಿಯಮದ ಬಗ್ಗೆ ಯಾರಿಗಾದರೂ ಆಕ್ಷೇಪಣೆ ಇದ್ದರೆ ಅಂಥವರು ನ್ಯಾಯಾಲಯ ಅಥವಾ ಅಧಿಕೃತ ಇಲಾಖೆಯ ಮೊರೆ ಹೋಗಬಹುದು ಎಂದು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಬುಧವಾರ ಹೇಳಿದ್ದಾರೆ.

ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಪ್ರಸ್ತಾವಿತ ಭಾರತ ಭೇಟಿಯು ರಾಜಕೀಯ ವಿವಾದವಾಗಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಖುರ್ಷಿದ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

`ಇದನ್ನು ದೊಡ್ಡ ವಿಚಾರವನ್ನಾಗಿ ಮಾಡಬಾರದು. ಇದು ಕಾನೂನು ಹಕ್ಕುಗಳಲ್ಲಿ ಅಡಿಯಲ್ಲಿ ನಡೆಯುವ ಪ್ರಕ್ರಿಯೆಗಳು. ಈ ಸಂಬಂಧ ರಾಜ್ಯ ಅಥವಾ ಕೇಂದ್ರದಲ್ಲಿ ಕಾಂಗ್ರೆಸ್‌ನಿಂದ ಯಾವುದೇ ವಿಶೇಷ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ~ ಎಂದು ಖುರ್ಷಿದ್ ಹೇಳಿದ್ದಾರೆ.

ಈಗ ಇರುವ ನಿಯಮಗಳ ಪ್ರಕಾರ ಭಾರತೀಯ ಮೂಲದ ವ್ಯಕ್ತಿಯೊಬ್ಬರು ವೀಸಾ ಇಲ್ಲದೆಯೇ ಭಾರತಕ್ಕೆ ಭೇಟಿ ನೀಡಬಹುದು. ಸಲ್ಮಾನ್ ರಶ್ದಿ ಅವರು ಕೂಡ ಇದೇ ರೀತಿಯಲ್ಲಿ ಭಾರತಕ್ಕೆ  ಭೇಟಿ ನೀಡಲು ಯತ್ನಿಸುತ್ತಿರಬಹುದು. ವಿದೇಶಗಳಲ್ಲಿರುವ ಭಾರತೀಯ ವ್ಯಕ್ತಿಗಳು ಹೊಂದಿರುವ ಕಾನೂನಿನ ಹಕ್ಕುಗಳ ಬಗ್ಗೆ ಆಕ್ಷೇಪಣೆಗಳಿದ್ದರೆ ಅವುಗಳನ್ನು ಅಧಿಕೃತ ಇಲಾಖೆ ಅಥವಾ ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು~ ಎಂದು ಖುರ್ಷಿದ್ ಹೇಳಿದ್ದಾರೆ.

ರಶ್ದಿ ಭೇಟಿ ಬಗ್ಗೆ ವಿವಿಧ ಕಡೆಗಳಿಂದ ಬಂದಿರುವ ಅಭಿಪ್ರಾಯಗಳನ್ನು ತಾವು ಖಂಡಿತವಾಗಿ ಸರ್ಕಾರಕ್ಕೆ ತಿಳಿಸುವುದಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರೂ ಆಗಿರುವ ಖುರ್ಷಿದ್ ಹೇಳಿದರು.

ರಶ್ದಿ ಅವರು ಈ ಹಿಂದೆ ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರವು  ಅವರ ವೀಸಾವನ್ನು ರದ್ದು ಪಡಿಸಬೇಕು ಎಂದು ದೇಶದ ಪ್ರಮುಖ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ದಿಯೊಬಂದ್ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.