ಪುಣೆ, (ಪಿಟಿಐ): ಬುಧವಾರ ಬೆಳಿಗ್ಗೆಯೇ ಇಲ್ಲಿನ ಜನ ನಿಬಿಡ ರಸ್ತೆಗೆ ನುಗ್ಗಿದ ಬಸ್ಸೊಂದು ದಾರಿಯಲ್ಲಿ ಎದುರಿಗೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಸಾಗಿದ ಪರಿಣಾಮ ಒಂಬತ್ತು ಮಂದಿ ಮೃತಪಟ್ಟಿದ್ದಾರೆ, ಜೊತೆಗೆ 27 ಮಂದಿಗೆ ಗಾಯಗಳಾಗಿವೆ.
ನಗರದ ಕೇಂದ್ರ ಪ್ರದೇಶದ ಸ್ವರಗೇಟ್ ಬಳಿ ಮಂಗಳವಾರ ಬೆಳಿಗ್ಗೆ ಜನ ನಿಬಿಡ ರಸ್ತೆಗೆ ನುಗ್ಗಿದ ಬಸ್ಸು ಅಲ್ಲಿನ ಜನಕ್ಕೆ ದುಃಸ್ವಪ್ನದಂತೆ ಕಾಡಿತು. ಸದಾ ಜನಜಂಗುಳಿಯಿಂದ ಕೂಡಿರುವ ಪುಣೆ- ಸೊಲ್ಲಾಪುರ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ನುಗ್ಗಿದ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಎದುರಿಗೆ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಸಾಗಿದಾಗ, ದಿಕ್ಕೆಟ್ಟ ಪಾದಚಾರಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡಬೇಕಾಯಿತು.
ಒಂದು ಗಂಟೆ ಕಾಲ ಬಸ್ಸನ್ನು ಬೆನ್ನಟ್ಟಿದ ಪೊಲೀಸರು ನಗರದ ನೀಲಾಯಮ್ ಚಿತ್ರಮಂದಿರದ ಹತ್ತಿರ ಅದನ್ನು ತಡೆದ ಬಸ್ ಚಾಲಕ ಸಂತೋಷ್ ಮಾನೆ (30) ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಸ್ ಚಾಲಕ ಮಾನಸಿಕ ಅಸ್ವಸ್ಥ ಎಂದು ಪ್ರಾಥಮಿಕ ಮಾಹಿತಿ ಲಭಿಸಿದರೆ, ಪೊಲೀಸರು ಇಷ್ಟು ಬೇಗನೇ, ಸದ್ಯಕ್ಕೆ ಏನೂ ಹೇಳಲಾಗದು ಎಂದು ತಿಳಿಸಿದ್ದಾರೆ.
ಬಸ್ಸಿನಿಂದಾದ ಸರಣಿ ಅಪಘಾತದ ಈ ದುರ್ಘಟನೆಯುಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿದ್ದರೆ, 27 ಮಂದಿಗೆ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.