ADVERTISEMENT

ಪ್ರಕರಣದ ಹಿನ್ನೆಲೆ ಏನು?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ನವದೆಹಲಿ: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದನ್ನು ಒಪ್ಪದ ಸಿಪಿಎಂ ನೇತೃತ್ವದ ಎಡಪಕ್ಷಗಳು  2008ರ ಜುಲೈನಲ್ಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆದವು. ಆಗ ಸರ್ಕಾರಕ್ಕೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಅನಿವಾರ್ಯತೆ ಎದುರಾಗಿತ್ತು.

ಎಡಪಕ್ಷಗಳು ಬೆಂಬಲ ವಾಪಸು ಪಡೆಯುವುದಕ್ಕೆ ಮುನ್ನ ಯುಪಿಎ ವಿರೋಧಿಯಾಗಿದ್ದ ಸಮಾಜವಾದಿ ಪಕ್ಷ, ಆ ಹಂತದಲ್ಲಿ ಸರ್ಕಾರದ ಪರ ವಾಲಿತು. ಆಗ ಅಮರ್ ಸಿಂಗ್ ಅವರು ಆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ವಿಶ್ವಾಸಮತ ಗೊತ್ತುವಳಿಗೆ ಮುನ್ನ 2008ರ ಜುಲೈ 22ರಂದು ಸದನದಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ಆಗ ದಿಢೀರ್ ಎದ್ದ ಬಿಜೆಪಿಯ ಮೂವರು ಸಂಸದರಾದ ಅಶೋಕ್ ಆರ್ಗಲ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಮಹಾವೀರ ಸಿಂಗ್ ಭಗೋರ ಅವರು ತಮ್ಮ ಬಳಿ ಇದ್ದ ಬ್ಯಾಗಿನಿಂದ ನೋಟಿನ ಕಂತೆಗಳನ್ನು ಎತ್ತಿ `ವಿಶ್ವಾಸಮತ ವೇಳೆ ತಮ್ಮ ಪರ ಮತ ಹಾಕಲು (ಅಥವಾ ತಟಸ್ಥವಾಗಿರಲು ಕೋರಿ)  ಸರ್ಕಾರ ತಮಗೆ ನೀಡಿರುವ ಹಣ ಇದು~ ಎಂದು ಪ್ರದರ್ಶಿಸಿದ್ದರು.

ಇದೇ ವೇಳೆ ಸಿಪಿಎಂ ಒಬ್ಬ ಸದಸ್ಯ ಕೂಡ, ಸದನದ ಪ್ರತಿ ಸದಸ್ಯನಿಗೂ ಸರ್ಕಾರ ಹಣದ ಆಮಿಷ ತೋರಿದೆ ಎಂದು ಆಪಾದಿಸಿದರು.

ಈ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನದಲ್ಲಿದ್ದ ಸೋಮನಾಥ ಚಟರ್ಜಿ, ಹೆಚ್ಚಿನ ತನಿಖೆ ನಡೆಸಲು ದೆಹಲಿ ಪೊಲೀಸರಿಗೆ ಸೂಚಿಸಿದ್ದರು. ನಂತರ ಸಂಸದೀಯ ಸಮಿತಿ ಕೂಡ ಪ್ರಕರಣದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT