ADVERTISEMENT

ಪ್ರಧಾನಿ ಎಷ್ಟು ಮಾತನಾಡುತ್ತಾರೆ: ಠಾಕ್ರೆ ಪ್ರಶ್ನೆ

ಪಿಟಿಐ
Published 5 ಅಕ್ಟೋಬರ್ 2017, 19:30 IST
Last Updated 5 ಅಕ್ಟೋಬರ್ 2017, 19:30 IST
ಪ್ರಧಾನಿ ಎಷ್ಟು ಮಾತನಾಡುತ್ತಾರೆ: ಠಾಕ್ರೆ ಪ್ರಶ್ನೆ
ಪ್ರಧಾನಿ ಎಷ್ಟು ಮಾತನಾಡುತ್ತಾರೆ: ಠಾಕ್ರೆ ಪ್ರಶ್ನೆ   

ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವು ಜನಸಾಮಾನ್ಯರ ನಿರೀಕ್ಷೆಗಳು ಮತ್ತು ಆಶೋತ್ತರಗಳನ್ನು ಈಡೇರಿಸಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್‌ ಠಾಕ್ರೆ ಗುರುವಾರ ಹೇಳಿದ್ದಾರೆ.

ಟಿ.ವಿ ಚಾನೆಲ್‌ಗಳಲ್ಲಿ ಮೋದಿ ಭಾಷಣ ಆರಂಭವಾದರೆ ಜನ ಆ ಚಾನೆಲ್‌ ನೋಡುವುದನ್ನು ನಿಲ್ಲಿಸಲು ಆರಂಭಿಸಿದ್ದಾರೆ. ನೀವು ಟಿ.ವಿ ಚಾನೆಲ್‌ ನೋಡುವುದನ್ನು ನಿಲ್ಲಿಸಿ ರೇಡಿಯೊ ಕೇಳಲು ಆರಂಭಿಸಿದರೆ ಅಲ್ಲಿಯೂ ‘ಮನ್‌ ಕಿ ಬಾತ್‌’ ಕಾರ್ಯಕ್ರಮವಿದೆ. ಏನಿದು? ಪ್ರಧಾನಿ ಎಷ್ಟು ಮಾತನಾಡುತ್ತಾರೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ಮುಂಬೈ ರೈಲು ನಿಲ್ದಾಣದ ಪಾದಚಾರಿ ಸೇತುವೆ ಮೇಲೆ ಕಳೆದವಾರ ಕಾಲ್ತುಳಿತ ಮತ್ತು ನೂಕುನುಗ್ಗಲಿನಿಂದ 23 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಪಶ್ಚಿಮ ರೈಲ್ವೆಯ ಪ್ರಧಾನ ವ್ಯವಸ್ಥಾಪಕರೊಂದಿಗೆ ಚರ್ಚೆ ನಡೆಸಿದ ಬಳಿಕ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

ಅಹಮದಾಬಾದ್‌– ಮುಂಬೈ ಬುಲೆಟ್‌ ರೈಲು ಯೋಜನೆಯನ್ನು ಖಂಡಿಸಿದ ಅವರು, ಇದು ಈ ನಗರಗಳಲ್ಲಿರುವ ಬೆರಳೆಣಿಕೆಯಷ್ಟು ಗುಜರಾತೀಯರಿಗಾಗಿ ರೂಪಿಸಿರುವ ಯೋಜನೆ. ಯೋಜನೆಯನ್ನು ವಿರೋಧಿಸಿದ ಕಾರಣಕ್ಕಾಗೇ ರೈಲ್ವೆ ಸಚಿವ ಸ್ಥಾನಕ್ಕೆ ಸುರೇಶ್‌ ಪ್ರಭು ಅವರನ್ನು ತೆಗೆದುಹಾಕಿ ಪೀಯೂಷ್‌ ಗೋಯಲ್‌ ಅವರನ್ನು ತರಲಾಯಿತು ಎಂದು ಭಾರಿ ಕರತಾಡನದ ನಡುವೆ ಹೇಳಿದರು.

ಪ್ರಧಾನಿ ಮೇಲೆ ಜನ ಭಾರಿ ಭರವಸೆ ಇರಿಸಿಕೊಂಡಿದ್ದರು. ಆದರೆ ಏನಾಯಿತು? ಆರ್ಥಿಕತೆ, ಬುಲೆಟ್‌ ರೈಲು, ಪೆಟ್ರೋಲಿಯಂ ಬೆಲೆ ಎಲ್ಲವುಗಳ ಬಗ್ಗೆ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಏನು ಹೇಳಿದ್ದರು ಹಾಗೂ ಈಗ ಏನು ಹೇಳುತ್ತಿದ್ದಾರೆ ಎಂಬ ವಿಡಿಯೊಗಳು ವೈರಲ್‌ ಆಗಿವೆ. ಇವುಗಳ ವಿಷಯದಲ್ಲಿ ಈಗ ಎಂತಹ ಸ್ಥಿತಿ ಇದೆ ಎಂಬುದು ಸಹ ಜನರಿಗೆ ತಿಳಿದಿದೆ. ಆಡಳಿತ ವ್ಯವಸ್ಥೆಯ ವಿರುದ್ಧ ಜನ ನಿಧಾನವಾಗಿ ಮಾತನಾಡಲಾರಂಭಿಸಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.