ADVERTISEMENT

ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ/ ಐಎಎನ್‌ಎಸ್): ಹಿರಿಯ ವಕೀಲ, ಅಣ್ಣಾ ತಂಡದ ಸದಸ್ಯ ಪ್ರಶಾಂತ್ ಭೂಷಣ್ ಅವರ ಮೇಲೆ ಶ್ರೀರಾಮ ಸೇನೆಗೆ ಸೇರಿದವರು ಎನ್ನಲಾದ ಯುವಕರಿಬ್ಬರು ಮನಬಂದಂತೆ ಹಲ್ಲೆ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ಸುಪ್ರೀಂಕೋರ್ಟ್ ಎದುರಿನ ನ್ಯೂ ಲಾಯರ್ಸ್ ಚೇಂಬರ್‌ನಲ್ಲಿ ನಡೆಯಿತು.

ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಜನಮತ ಸಂಗ್ರಹಿಸಬೇಕೆಂಬ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಚೇಂಬರ್‌ನ ತಮ್ಮ ಕೊಠಡಿಯಲ್ಲಿ ಭೂಷಣ್ ಅವರು, ಟಿ.ವಿ ವಾಹಿನಿಯೊಂದರ ಜತೆ ಮಾತನಾಡುತ್ತ್ದ್ದಿದರು. ಆಗ ಏಕಾಏಕಿ ಕೊಠಡಿಯೊಳಗೆ ನುಗ್ಗಿದ ಯುವಕರು ಹಲ್ಲೆಗೆ ಮುಂದಾದರು.

ಭೂಷಣ್ ಅವರನ್ನು ಕುರ್ಚಿಯಿಂದ ಕೆಳಗೆ ತಳ್ಳಿ ಅವರ ಕೆನ್ನೆಗೆ ಹೊಡೆದರು. ರೋಶಾವೇಷದಿಂದ ಅವರನ್ನು ಮನಬಂದಂತೆ ಎಳೆದಾಡಿ, ಮುಖ ಹಾಗೂ ಎದೆಯ ಮೇಲೆಲ್ಲ ಗುದ್ದಿದರು. ಭೂಷಣ್ ಅವರ ಸಿಬ್ಬಂದಿ ಹಾಗೂ ಇತರರು ಅಲ್ಲಿಗೆ ಧಾವಿಸುವಷ್ಟರಲ್ಲಿ ಒಬ್ಬ ದುಷ್ಕರ್ಮಿ ಪರಾರಿಯಾಗಿದ್ದ. ಇನ್ನೊಬ್ಬನನ್ನು ಹಿಡಿದು ಪೊಲೀಸ್ ಸುಪರ್ದಿಗೆ ಒಪ್ಪಿಸಲಾಯಿತು. ಆತನನ್ನು ಇಂದ್ರ ವರ್ಮ (24) ಎಂದು ಗುರುತಿಸಲಾಗಿದೆ.

ತಾನು ಶ್ರೀ ರಾಮ ಸೇನೆಯ ದೆಹಲಿ ಘಟಕದ ಅಧ್ಯಕ್ಷ ಎಂದಾತ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಭೂಷಣ್ ಅವರ ಭೇಟಿಗೆ ಬಂದಿರುವುದಾಗಿ ಹೇಳಿಕೊಂಡು ಈ ಯುವಕರು ಅವರ ಕಚೇರಿಗೆ ನುಗ್ಗಿದ್ದರು. ಭೂಷಣ್ ಅವರ ನೆರವಿಗೆ ಬಂದ ಅವರ ಸಹಾಯಕನ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
 
ಭೂಷಣ್ ಅವರನ್ನು ಕೂಡಲೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. `ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ~ ಎಂದು ವೈದ್ಯಕೀಯ ಮೇಲ್ವಿಚಾರಕ ಟಿ.ಎಸ್.ಸಿದ್ಧು ಸ್ಪಷ್ಟಪಡಿಸಿದ್ದಾರೆ.

ಕ್ರಮಕ್ಕೆ ಆದೇಶ: ಹಲ್ಲೆಯನ್ನು ಖಂಡಿಸಿರುವ ಗೃಹ ಸಚಿವ ಪಿ.ಚಿದಂಬರಂ, `ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.    

 `ಕಾಶ್ಮೀರ ಹೇಳಿಕೆ ಕಾರಣವೇ~

`ನಾನು ಕಾಶ್ಮೀರ ವಿಷಯಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡ್ದ್ದಿದು ಅಸಮಾಧಾನ ತಂದಿದೆ~ ಎಂದು ಅವರು ಹೇಳುತ್ತಿದ್ದರು. ಎರಡು ವಾರಗಳ ಹಿಂದೆ ವಾರಣಾಸಿಗೆ ಹೋಗಿದ್ದಾಗ ನಾನು ಕಾಶ್ಮೀರದಲ್ಲಿ ಜನಮತ ಸಂಗ್ರಹ ಮಾಡಬೇಕೆಂದು ಹೇಳಿದ್ದೆ. ಬಹುಶಃ ಇದಕ್ಕಾಗಿಯೇ ಅವರು ನನ್ನ ಮೇಲೆ ಹಲ್ಲೆ ನಡೆಸಿದಂತೆ ಕಾಣುತ್ತದೆ~ ಎಂದು ಭೂಷಣ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.