ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡದಿರುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾನವ ಸಂಪನ್ಮೂಲ ಸಚಿವಾಲಯ(ಎಚ್ಆರ್ಡಿ) ಎಚ್ಚರಿಕೆ ನೀಡಿದೆ.
ಶುಕ್ರವಾರ(ಏ.06)ರಂದು ನಡೆದ ರಾಜ್ಯಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಹೀಗಾಗಿ ಸಚಿವಾಲಯ ಎಚ್ಚರಿಕೆ ನೀಡಿದೆ.
‘ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಮತ್ತೆ ಹರಡಿವೆ. ವಿದ್ಯಾರ್ಧಿಗಳು ಮತ್ತು ಪೋಷಕರು ಈ ಬಗ್ಗೆ ಗೊಂದಲಕ್ಕೊಳಗಾಗಬಾರದು. ರಾಜ್ಯಶಾಸ್ತ್ರ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿದೆ ಎಂಬುದು ಸುಳ್ಳುಸುದ್ದಿ. ಸಿಬಿಎಸ್ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯದಂತೆ ಮಾಡಲು ಹಿಂದೆಯೂ ಇಂತಹ ಪ್ರಯತ್ನಗಳು ನಡೆದಿವೆ’ ಎಂದು ಸಚಿವಾಲಯದ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿಲ್ ಸ್ವರೂಪ್ ಹೇಳಿದ್ದಾರೆ.
ಸದ್ಯ ಸಿಬಿಎಸ್ಸಿ, 10ನೇ ತರಗತಿಯ ಗಣಿತ ಹಾಗೂ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಉನ್ನತ ಸಮಿತಿಯೊಂದನ್ನು ರಚಿಸಿದೆ.
ಸೋರಿಕೆಯಾಗಿದ್ದ 12ನೇ ತರಗತಿ ಅರ್ಥಶಾಸ್ತ್ರ ವಿಷಯದ ಮರುಪರೀಕ್ಷೆಯನ್ನು ಏಪ್ರಿಲ್ 25ಕ್ಕೆ ಮಾಡುವುದಾಗಿ ಸಚಿವಾಲಯ ಕಳೆದವಾರ ತಿಳಿಸಿತ್ತು. ಜತೆಗೆ ದೆಹಲಿ ಹಾಗೂ ಹರಿಯಾಣ ಪ್ರದೇಶಗಳಲ್ಲಿ ಮಾತ್ರವೇ ಜುಲೈನಲ್ಲಿ 10ನೇ ತರಗತಿ ಗಣಿತ ವಿಷಯದ ಮರು ಪರೀಕ್ಷೆಯನ್ನು ಮಾಡಲಾಗುವುದು ಎಂದೂ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.