ADVERTISEMENT

ಬಂದೂಕಿನಿಂದ ಸಮಸ್ಯೆ ಪರಿಹಾರ ಅಸಾಧ್ಯ

ಜನರಲ್‌ ಬಿಪಿನ್‌ ರಾವತ್‌ ಅನಿಸಿಕೆ

ಪಿಟಿಐ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಬಿಪಿನ್‌ ರಾವತ್‌
ಬಿಪಿನ್‌ ರಾವತ್‌   

ನವದೆಹಲಿ: ಬಂದೂಕಿನ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದು ತೀವ್ರವಾದದತ್ತ ಆಕರ್ಷಿತರಾಗಿರುವ ಕಾಶ್ಮೀರದ ಯುವ ಜನರಿಗೆ ಮನವರಿಕೆ ಆಗಲಿದೆ. ಸೇನೆಯಾಗಲಿ ಅಥವಾ ಉಗ್ರರಾಗಲಿ ಸಂಘರ್ಷದ ಮೂಲಕ ತಮ್ಮ ಗುರಿ ಸಾಧಿಸಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ್ದಾರೆ.

ಸುಮಾರು ಮೂರು ದಶಕಗಳಿಂದ ಉಗ್ರವಾದದಿಂದ ತಲ್ಲಣಿಸಿರುವ ಕಾಶ್ಮೀರದ ಪರಿಸ್ಥಿತಿಯನ್ನು ಶಾಂತಿಯ ಮೂಲಕ ಮಾತ್ರ ಸರಿಪಡಿಸುವುದು ಸಾಧ್ಯ. ಕಾಶ್ಮೀರದ ಪರಿಸ್ಥಿತಿ ಉತ್ತಮಗೊಳ್ಳುವ ಆಶಾವಾದ ಇದೆ. ಕೆಲವು ಯುವಕರು ದಾರಿ ತಪ್ಪಿದ್ದಾರೆ. ಭಯೋತ್ಪಾದನೆಯತ್ತ ಆಕರ್ಷಿತರಾಗಿದ್ದಾರೆ. ಬಂದೂಕಿನ ಬಲದಿಂದ ತಮ್ಮ ಗುರಿ ಸಾಧಿಸಬಹುದು ಎಂದು ಅವರು ಭಾವಿಸಿದ್ದಾರೆ ಎಂದು ರಾವತ್‌ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಬಲಪ್ರಯೋಗ ಅಥವಾ ಭಯೋತ್ಪಾದನೆ ಮೂಲಕ ಗುರಿ ಸಾಧಿಸಲಾಗದು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವ ದಿನ ದೂರವಿಲ್ಲ. ಎಲ್ಲರೂ ಜತೆಯಾಗಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಂತಹ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ ಎಂಬ ಆಶಾವಾದವನ್ನು ರಾವತ್‌ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲಘು ಪದಾತಿದಳದ ಸ್ಥಾಪನೆಯ 70ನೇ ವರ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಕಾಶ್ಮೀರದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎನ್ನುವುದು ಸರಿಯಲ್ಲ. ವಾತಾವರಣ ಬಿಗುವಿನಿಂದ ಕೂಡಿದ್ದರೂ ಹಿಂದಿಗಿಂತ ಹದಗೆಟ್ಟಿಲ್ಲ. ಕಾಶ್ಮೀರಿತನದ ನಿಜವಾದ ತಿರುಳೇ ವೈವಿಧ್ಯದಲ್ಲಿ ಏಕತೆ. ಇದನ್ನು ಯುವಜನರಿಗೆ ತಿಳಿಸಬೇಕಿದೆ ಎಂದು ಅವರು ಹೇಳಿದ್ದಾರೆ.

**

ಕಣಿವೆಯ ಒಂದು ವರ್ಗದ ಯುವಕರು ಹಾದಿ ತಪ್ಪಿದ್ದರೂ ಆ ಸಂಖ್ಯೆ ಬಹಳ ಸಣ್ಣದು. ಶಾಂತಿ ಬಯಸುವ, ತಾವು ಭಾರತೀಯರು ಎಂದು ಭಾವಿಸಿರುವ ಜನರೇ ಬಹುಸಂಖ್ಯಾತರು
ಜನರಲ್‌ ಬಿಪಿನ್‌ ರಾವತ್‌ , ಸೇನಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.