ADVERTISEMENT

ಬಳ್ಳಾರಿ ಅಕ್ರಮ ಗಣಿಗಾರಿಕೆಯ ಸಿಬಿಐ ತನಿಖೆಗೆ ಸುಪ್ರೀಂ ಅಸ್ತು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 10:50 IST
Last Updated 23 ಸೆಪ್ಟೆಂಬರ್ 2011, 10:50 IST

ನವದೆಹಲಿ, (ಪಿಟಿಐ): ಆಂಧ್ರ ಪ್ರದೇಶದ ಓಬಳಾಪುರಂ ಮತ್ತು ಕರ್ನಾಟಕದ ಬಳ್ಳಾರಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ನಡುವಿನ ಸಂಬಂಧಗಳ ಕುರಿತು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐಗೆ ನಿರ್ದೇಶನ ನೀಡಿದೆ.

ಜೊತೆಗೆ ಬಂಧಿತ ರೆಡ್ಡಿ ಸಹೋದರರ ಮಾಲಿಕತ್ವದ ಓಬಳಾಪುರಂ ಗಣಿ ಸಂಸ್ಥೆಯ ಕುರಿತಂತೆ ಸಿಬಿಐ ಇದುವರೆಗೆ ಕೈಗೊಂಡಿರುವ ತನಿಖೆಯ ಸದ್ಯದ ಮಾಹಿತಿಯ ವರದಿ ನೀಡುವಂತೆಯೂ ಸೂಚಿಸಿದೆ.

ಐಎಎನ್ಎಸ್  ವರದಿ: ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಸುಪ್ರೀಂ ಕೋರ್ಟಿನ ಅರಣ್ಯ ಪೀಠ, ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಹೊಂದಿರುವ ಕರ್ನಾಟಕದ ಎರಡು ಗಣಿ ಸಂಸ್ಥೆಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಶುಕ್ರವಾರ ಆದೇಶ ನೀಡಿದೆ.

ADVERTISEMENT

ಕರ್ನಾಟಕದ ಮಾಜಿ ಸಚಿವ ಜಿ, ಜನಾರ್ದನ ರೆಡ್ಡಿ ಅವರ  ಮಾಲಿಕತ್ವದ ಅಸೋಸಿಯೇಟೆಡ್ ಮೈನಿಂಗ ಕಂಪೆನಿ ಮತ್ತು ಎಸ್.ಎಂ ಜೈನ್ ಮಾಲಿಕತ್ವದ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಸಂಸ್ಥೆಗಳು ನಡೆಸಿರಬಹುದಾದ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಸಲು ಸೂಚಿಸಲಾಗಿದೆ.

ಆಂಧ್ರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯ ಆರೋಪದ ಮೇಲೆ ಕರ್ನಾಟಕದ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತು ಭಾವ ಶ್ರೀನಿವಾಸ ರೆಡ್ಡಿ ಅವರನ್ನು ಈಗಾಗಲೇ ಬಂಧಿಸಿ ಜೈಲಿನಲ್ಲಿರಿಸಲಾಗಿದೆ.

ಬುಧವಾರ ಸುಪ್ರೀಂ ಕೋರ್ಟ್ ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಯು ರೆಡ್ಡಿಗಳು ಕರ್ನಾಟಕದಲ್ಲಿ ಹೊಂದಿರುವ ಅಕ್ರಮ ಗಣಿಗಾರಿಕೆಯ ಬಗ್ಗೆಯೂ ಸಿಬಿಐ ತನಿಖೆ ನಡೆಸುವಂತೆ ಸಲಹೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.