ADVERTISEMENT

ಬಾದಲ್, ಅಖಿಲೇಶ್ ಪ್ರಮಾಣ ವಚನ ಸಮಾರಂಭದಿಂದ ಮಮತಾ ದೂರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಕೋಲ್ಕತ್ತ(ಪಿಟಿಐ): ಪಂಜಾಬ್ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸದೇ ಇರಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ.

ಈ ಸಮಾರಂಭಗಳಿಗೆ ತಮ್ಮ ಪ್ರತಿನಿಧಿಯಾಗಿ ಪಕ್ಷದ ಇಬ್ಬರು ನಾಯಕರನ್ನು ಕಳುಹಿಸಿಕೊಡಲು ಅವರು ತೀರ್ಮಾನಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಭಾನುವಾರ ತಿಳಿಸಿದೆ.

`ನಾನು ಈಗಷ್ಟೆ ಮಮತಾ ಅವರೊಂದಿಗೆ ಮಾತನಾಡಿದೆ. ಚಂಡೀಗಡ ಮತ್ತು ಲಖನೌ ಪ್ರವಾಸ ಕೈಗೊಳ್ಳಲು ಅವರಿಗೆ ಆಸಕ್ತಿ ಇತ್ತು. ಆದರೆ ಈ ತಿಂಗಳ 15ರಂದು ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ರಾಜ್ಯಪಾಲರು ಭಾಷಣ ಮಾಡಲಿದ್ದು ಮುಖ್ಯಮಂತ್ರಿ  ಪಶ್ಚಿಮಬಂಗಾಳದಲ್ಲೇ ಇರಬೇಕಾಗಿದೆ~ ಎಂದು ಪಕ್ಷದ ನಾಯಕ ಮತ್ತು ರಾಜ್ಯಸಭೆ ಸದಸ್ಯ ಡೇರಿಕ್ ಒ~ ಬ್ರಿಯೆನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಚಂಡೀಗಡದಲ್ಲಿ ಈ ತಿಂಗಳ 14ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಕಾಶ್‌ಸಿಂಗ್ ಬಾದಲ್ ಮತ್ತು ಲಖನೌದಲ್ಲಿ 15ರಂದು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಅಖಿಲೇಶ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು ಈ ಸಮಾರಂಭಗಳಿಗೆ  ಮಮತಾ ಅವರಿಗೆ ವಿಶೇಷ ಆಹ್ವಾನ ಇತ್ತು.

ಈಗ ತಮ್ಮ ಪ್ರತಿನಿಧಿಯಾಗಿ ಪಂಜಾಬ್‌ಗೆ ತೆರಳುವಂತೆ ರಾಜ್ಯದ ಪ್ರವಾಸೋದ್ಯಮ ಸಚಿವ ರಚ್‌ಪಾಲ್ ಸಿಂಗ್ ಮತ್ತು ಉತ್ತರಪ್ರದೇಶಕ್ಕೆ ತೆರಳುವಂತೆ ಕೇಂದ್ರದ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರಾದ ಸುಲ್ತಾನ್ ಅಹ್ಮದ್ ಅವರಿಗೆ ಮಮತಾ ಸೂಚಿಸಿದ್ದಾರೆ ಎನ್ನಲಾಗಿದೆ. ಬಾದಲ್ ಮತ್ತು ಅಖಿಲೇಶ್ ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಹಾಜರಾಗಲು ಯತ್ನಿಸುವುದಾಗಿ ಮಮತಾ ಶನಿವಾರವಷ್ಟೆ ಹೇಳಿದ್ದರು.

ವಿಧಾನಸಭೆ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಜರಿರುವುದು ಸಂಪ್ರದಾಯ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್ ಹೇಳಿದ್ದಾರೆ.

ನವದೆಹಲಿ  ವರದಿ: ಈ ಮಧ್ಯೆ ಕಾಂಗ್ರೆಸ್ ಮಮತಾಗೆ `ಸಮ್ಮಿಶ್ರ ಧರ್ಮದ~ `ಲಕ್ಷ್ಮಣ ರೇಖೆಯನ್ನು~ ದಾಟದಂತೆ ಅಕ್ಷರಶಃ ಎಚ್ಚರಿಕೆ ನೀಡಿ `ಎನ್‌ಡಿಎ ಮಿತ್ರಪಕ್ಷಗಳ ಜತೆಗಿನ ಮಿತಿಮೀರಿದ ಸಂಪರ್ಕವು ಅನೈತಿಕ ಎನಿಸುತ್ತದೆ~ ಎಂದು ಹೇಳಿದೆ. ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ವರದಿಗಾರರ ಜತೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಆ ನಂತರದಲ್ಲಿ ಸಿಂಘ್ವಿ ಅವರು `ಅವರು ಹೋಗುವುದು, ಬಿಡುವುದು ಈ ರೀತಿ ಸುದ್ದಿ ಯಾಕಾಗಬೇಕು ಎಂಬುದು ನನಗೆ ಅರ್ಥವಾಗುತ್ತಿಲ್ಲ~ ಎಂದಿದ್ದಾರೆ.

ಬಾದಲ್ ಅವರ ಶಿರೋಮಣಿ ಅಕಾಲಿದಳ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಅಂಗಪಕ್ಷವಾಗಿದ್ದರೆ, ಸಮಾಜವಾದಿ ಪಕ್ಷವು ಕೇಂದ್ರ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.