ADVERTISEMENT

ಬಾಬಾ ರಾಮ್‌ದೇವ್ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST

ಡೆಹ್ರಾಡೂನ್/ ನವದೆಹಲಿ (ಪಿಟಿಐ): ಉಪವಾಸ ಸತ್ಯಾಗ್ರಹದಿಂದ ನಿಶ್ಶಕ್ತರಾಗಿ ಆಸ್ಪತ್ರೆ ಸೇರಿರುವ ಬಾಬಾ ರಾಮ್‌ದೇವ್ ಅವರ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡು ಬರುತ್ತಿದೆ. ಅವರನ್ನು ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡಿಗೆ ಸ್ಥಳಾಂತರಿಸಲಾಗಿದೆ.

ಇಲ್ಲಿಂದ 21 ಕಿ.ಮೀ ದೂರದಲ್ಲಿರುವ ಹಿಮಾಲಯನ್ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಒತ್ತಾಯಪೂರ್ವಕವಾಗಿ ಅವರಿಗೆ ಚೇತರಿಕೆಯ ದ್ರವ ನೀಡುತ್ತಿದೆ. ಆದರೆ ಅವರು ಬಾಯಿಯ ಮೂಲಕ ಯಾವುದೇ ಆಹಾರ ಸೇವಿಸುತ್ತಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಮಧ್ಯೆ ರಾಮ್‌ದೇವ್ ಸತ್ಯಾಗ್ರಹ ಕೈಬಿಡುವಂತೆ ಮಾಡಲು ರಾಜಕೀಯ ಮತ್ತು ಆಧ್ಯಾತ್ಮಿಕ ಮುಖಂಡರು ಸತತ ಪ್ರಯತ್ನ ನಡೆಸಿದ್ದಾರೆ. ರಾಮ್‌ದೇವ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀ ಶ್ರೀ ರವಿಶಂಕರ ಗುರೂಜಿ `ಸತ್ಯಾಗ್ರಹ ಮುಂದುವರಿಸುವ ವಿಷಯದಲ್ಲಿ ಅವರು ದೃಢವಾಗಿದ್ದಾರೆ. ನಾನು ಸಹ ಅವರ ವಿಷಯದಲ್ಲಿ ಅಷ್ಟೇ ಕಠಿಣವಾಗಿದ್ದೇನೆ. ಎಲ್ಲಿಯವರೆಗೆ ರಾಮ್‌ದೇವ್ ಸತ್ಯಾಗ್ರಹ ಕೈಬಿಡುವುದಿಲ್ಲವೋ ಅಲ್ಲಿಯವರೆಗೂ ಇಲ್ಲೇ ಉಳಿಯುತ್ತೇನೆ~ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

`ರಾಮ್‌ದೇವ್ ಅವರ ಮನ ವೊಲಿಸಲು ಕೇಂದ್ರ ಸರ್ಕಾರ ನನ್ನನ್ನು ಕೇಳಿಲ್ಲ. ಸರ್ಕಾರ ಬಯಸಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ~ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‌ಎಸ್ ಮನವಿ: `ದೇಶದ ಪುನರುಜ್ಜೀವನಕ್ಕಾಗಿ ರಾಮ್‌ದೇವ್ ಅಂತಹವರ ನಾಯಕತ್ವ ಮತ್ತು ಮಾರ್ಗ ದರ್ಶನದ ಅಗತ್ಯವಿದೆ. ಆದ್ದರಿಂದ ಅವರು ತಮ್ಮ ಉಪವಾಸವನ್ನು ಆದಷ್ಟು ಬೇಗ ಕೊನೆಗೊಳಿಸ ಬೇಕು~ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಒತ್ತಾಯಿಸಿದ್ದಾರೆ.

`ಸಾಕಷ್ಟು ಹಿಂದೂ ಸಂತರು ಈಗಾಗಲೇ ಸತ್ಯಾಗ್ರಹ ಕೈಬಿಡು ವಂತೆ ರಾಮ್‌ದೇವ್ ಅವರನ್ನು ಕೋರಿದ್ದಾರೆ.ಅವರ ಭಾವನೆಗಳಿಗೆ ಬೆಲೆ ಕೊಟ್ಟು ಭ್ರಷ್ಟಾಚಾರ ಮತ್ತು ಕಪ್ಪುಹಣ ವಿರೋಧಿ ಚಳವಳಿ ಯನ್ನು ಇನ್ನಷ್ಟು ದೃಢ ಸಂಕಲ್ಪ ದಿಂದ ಕೈಗೆತ್ತಿಕೊಳ್ಳಲು ರಾಮ್‌ದೇವ್ ಮುಂದಾಗಬೇಕು~ ಎಂದು ವಿಎಚ್‌ಪಿ ಅಧ್ಯಕ್ಷ ಅಶೋಕ್ ಸಿಂಘಾಲ್ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.