ಚೆನ್ನೈ (ಐಎಎನ್ಎಸ್): ಕಳೆದ ವರ್ಷ 13 ವರ್ಷದ ಬಾಲಕನೊಬ್ಬನನ್ನು ಗುಂಡಿಕ್ಕಿ ಕೊಂದ ಕೆ.ರಾಮರಾಜ್ ಎಂಬ ನಿವೃತ್ತ ಸೇನಾಧಿಕಾರಿಗೆ ಸ್ಥಳೀಯ ತ್ವರಿತ ಗತಿಯ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಮತ್ತು 60 ಸಾವಿರ ರೂಪಾಯಿ ದಂಡ ವಿಧಿಸಿದೆ.
ತಮ್ಮ ಮನೆಯ ಆವರಣದಲ್ಲಿ ಬಿದ್ದಿದ್ದ ಬಾದಾಮಿ ಹಣ್ಣುಗಳನ್ನು ಆಯ್ದುಕೊಳ್ಳಲು ಬಂದಿದ್ದ ಬಾಲಕ ಕೆ.ದಿಲ್ಶಾನ್ನನ್ನು ರಾಮರಾಜ್ ಗುಂಡಿಕ್ಕಿ ಕೊಂದಿದ್ದರು.
ದಂಡದ ಹಣದಲ್ಲಿ 50 ಸಾವಿರ ರೂಪಾಯಿಯನ್ನು ಮೃತ ಬಾಲಕನ ಕುಟುಂಬಕ್ಕೆ ನೀಡುವಂತೆ ಆದೇಶಿಸಲಾಗಿದೆ. ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಾಲಕನ ತಾಯಿ, ಎಲ್ಲರಿಗೂ ಇದೊಂದು ಪಾಠವಾಗಲಿ, ಅಂತಹ ಘಟನೆ ಎಲ್ಲೂ, ಯಾರಿಗೂ ನಡೆಯಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.
ಸೇವೆಯಲ್ಲಿರುವ ಮತ್ತು ನಿವೃತ್ತ ಸೇನಾ ಅಧಿಕಾರಿಗಳ ವಸತಿ ಗೃಹಗಳಿರುವ ಆವರಣಕ್ಕೆ ಸ್ನೇಹಿತರೊಂದಿಗೆ ಅತಿಕ್ರಮ ಪ್ರವೇಶ ಮಾಡಿದ ದಿಲ್ಶಾನ್ನನ್ನು ಕಂಡು ರಾಮರಾಜ್ ಕಿಡಿಕಿಡಿಯಾಗಿದ್ದರು. ಅವರು ತಮ್ಮ ಮನೆಯ ಮಹಡಿಯ ಮೇಲೆ ನಿಂತು ಹಾರಿಸಿದ ಗುಂಡಿನಿಂದ ತೀವ್ರವಾಗಿ ಗಾಯಗೊಂಡ ದಿಲ್ಶಾನ್ ಆಸ್ಪತ್ರೆಯಲ್ಲಿ ಮೃತನಾಗಿದ್ದ.
ಈ ಘಟನೆ ದೇಶದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ, ಕಾರಣಕರ್ತರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು. ನ್ಯಾಯಾಲಯ 55 ಸಾಕ್ಷಿಗಳನ್ನು ಪರಿಶೀಲಿಸಿತ್ತು. ಬಾಲಕನನ್ನು ಕೊಂದ ನಂತರ ಹತ್ತಿರದ ನದಿಗೆ ಎಸೆದಿದ್ದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬಂದೂಕಿನ ಪರವಾನಗಿ ನವೀಕರಣಗೊಂಡಿರಲಿಲ್ಲ. ಕೊಲೆ ಪ್ರಕರಣ ಭೇದಿಸಲು 12 ತಂಡಗಳನ್ನು ರಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.